ಇಬ್ಬರು ಪುಟಾಣಿ ಮಕ್ಕಳಿಗೆ ವಿಷವುಣಿಸಿ ಹತ್ಯೆಗೈಯ್ದು ತಂದೆ ಆತ್ಮಹತ್ಯೆಗೆ ಯತ್ನ
ಕಲಬುರಗಿ, ಜ.3: ಇಬ್ಬರು ಕಂದಮ್ಮಗಳಿಗೆ ತಂದೆಯೇ ವಿಷ ಕುಡಿಸಿ ಹತ್ಯೆಗೈದು ತಾನು ವಿಷ ಕುಡಿದು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಹೃದಯ ವಿದ್ರಾವಕ ಘಟನೆ ಇಲ್ಲಿನ ಚಿಂಚೋಳಿ ತಾಲೂಕಿನ ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಭೈರಂಪಳ್ಳಿ ತಾಂಡಾ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಸಂಜೀವ್ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಸಂಜೀವ್ ನ ಇಬ್ಬರು ಮಕ್ಕಳಾದ ರೋಹಿತ್ (4) ಹಾಗೂ ಪರ್ವಿನ್ (3) ವಿಷಪ್ರಾಶನದಿಂದ ಕೊಲೆಯಾದವರು.
ಹೈದ್ರಾಬಾದ್ ನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ ಸಂಜೀವ್ ಇತ್ತೀಚಿಗಷ್ಟೆ ಸ್ವ ಗ್ರಾಮಕ್ಕೆ ಮರಳಿದ್ದನೆನ್ನಲಾಗಿದೆ. ಬಳಿಕ ದಂಪತಿ ನಡೆವು ಕಲಹ ಉಂಟಾಗಿ, ಪತ್ನಿ ಮನೆ ತೊರೆದು ತವರಮನೆ ಸೇರಿಕೊಂಡಿದ್ದಳು ಎಂದು ತಿಳಿದುಬಂದಿದೆ..
ಆರೋಪಿ ಸಂಜೀವ್ ನಿನ್ನೆ ರಾತ್ರಿ ತನ್ನ ಇಬ್ಬರು ಮಕ್ಕಳನ್ನು ಕರೆತಂದು ಕುಡಿದ ಮತ್ತಿನಲ್ಲಿ ಜಮೀನೊಂದಕ್ಕೆ ಕರೆದ್ಯೊಯ್ದು ಅವರಿಗೆ ವಿಷ ಕುಡಿಸಿ, ನಂತರ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆರೋಪಿ ಸಂಜೀವನನ್ನು ಪೊಲೀಸರು ಬಂಧಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜೀವ್ ಈ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.