ಸಚಿವ ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ ?
ಶಿವಮೊಗ್ಗ, ಜ. 4: ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪರ ಮೊಬೈಲ್ಗೆ ಶುಕ್ರವಾರ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆನ್ನಲಾದ ಘಟನೆ ನಡೆದಿದೆ.
ತಮಿಳು ಭಾಷೆಯಲ್ಲಿ ಅಪರಿಚಿತ ಮಾತನಾಡಿದ್ದಾನೆ. ಮೊಬೈಲ್ನಿಂದ ಕರೆಯನ್ನು ಸಚಿವರ ಆಪ್ತ ಸಹಾಯಕ ಸ್ವೀಕರಿಸಿದ್ದಾನೆ. "ಈಶ್ವರಪ್ಪನವರು ಕೇವಲ ಹಿಂದುತ್ವ ಕುರಿತು ಮಾತನಾಡುತ್ತಾರೆ. ಮುಂದಿನ 48 ಗಂಟೆಯ ಒಳಗೆ ಅವರ ಜೀವಕ್ಕೆ ಅಪಾಯವಾಗಲಿದೆ' ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಸಚಿವರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ದೂರು ದಾಖಲಿಸಿಲ್ಲ.
ಕಳೆದ ವರ್ಷವೂ ದುಬೈನಿಂದ ಕೆ.ಎಸ್.ಈಶ್ವರಪ್ಪರ ಮೊಬೈಲ್ಗೆ ಕರೆ ಮಾಡಿದ್ದ ವ್ಯಕ್ತಿಯೋರ್ವ ಜೀವ ಬೆದರಿಕೆ ಹಾಕಿದ್ದ. ಈ ಕುರಿತಂತೆ ಈಶ್ವರಪ್ಪರವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ಬಾರಿ ಸಚಿವರು ಜಿಲ್ಲಾ ರಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಇನ್ನಷ್ಟೆ ದೂರು ನೀಡಬೇಕಾಗಿದೆ.
Next Story