ಮಾಜಿ ಸಚಿವ ಕೆ.ಜೆ.ಜಾರ್ಜ್ಗೆ ಈಡಿ ಸಮನ್ಸ್
ಬೆಂಗಳೂರು, ಜ.14: ಮಾಜಿ ಸಚಿವ ಕೆ.ಜೆ.ಜಾರ್ಜ್ ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾದ ಆರೋಪ ಪ್ರಕರಣ ಸಂಬಂಧ ನಾಳೆ(ಜ.16) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ (ಈ.ಡಿ) ಸಮನ್ಸ್ ಜಾರಿಗೊಳಿಸಿದೆ.
ಕೆ.ಜೆ.ಜಾರ್ಜ್ ಮಾತ್ರವಲ್ಲದೆ, ಇವರ ಪತ್ನಿ ಸುಜಾ ಜಾರ್ಜ್, ಪುತ್ರ ರಾಣಾ ಜಾರ್ಜ್ ಹಾಗೂ ಪುತ್ರಿ ರೆನಿತಾ ಅವರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ.
ನಾಲ್ವರೂ ಹೊಂದಿರುವ ಬ್ಯಾಂಕ್ ಖಾತೆಯ ವಿವರ, ದೇಶ ಹಾಗೂ ವಿದೇಶದಲ್ಲಿ ಹೊಂದಿರುವ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರಗಳು, 2005-06 ರಿಂದ ಇದುವರೆಗೆ ಆದಾಯ ತೆರಿಗೆ ಪಾವತಿಸಿರುವ ದಾಖಲೆ, ಉದ್ಯಮ, ಕಂಪನಿಗಳಲ್ಲಿ ಹೊಂದಿರುವ ಷೇರುಗಳ ವಿವರಗಳು ಸೇರಿ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸುವಂತೆ ಸಮನ್ಸ್ನಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ: ಕೆ.ಜೆ ಜಾರ್ಜ್ ಅವರ ಆಪ್ತ ಕುಟುಂಬ ಸದಸ್ಯರು, ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಹೊಂದಿದ್ದಾರೆ ಎನ್ನಲಾದ ಆಸ್ತಿಯ ವಿವರ ಮತ್ತು ದಾಖಲೆಗಳ ಸಮೇತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಇತ್ತೀಚೆಗೆ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರಿಗಳಿಗೆ ಸಲ್ಲಿಸಿ, ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದರು.
2014-15ರಲ್ಲಿ ಲೋಕಾಯುಕ್ತರಿಗೆ ಜಾರ್ಜ್ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಎರಡು ಆಸ್ತಿ ವಿವರ ಮಾತ್ರ ಉಲ್ಲೇಖಿಸಲಾಗಿದೆ. ಆದರೆ, ಹೂಡಿರುವ ಹಣದ ವಿವರ ಬಿಟ್ಟು ಬೇರೆ ಯಾವುದೇ ವಿವರ ನೀಡಲಿಲ್ಲ. 2008ರಿಂದಲೇ ವಿದೇಶದಲ್ಲಿ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದರೂ, ಇದರ ವಿವರಗಳನ್ನು ತಮ್ಮ ಚುನಾವಣಾ ಅಫಿಡವಿಟ್ಗಳಲ್ಲಿ ತಿಳಿಸಲಿಲ್ಲ. ಇವರ ಕುಟುಂಬ ಸದಸ್ಯರು, ಇಷ್ಟು ಪ್ರಮಾಣದಲ್ಲಿ ಆಸ್ತಿ ಖರೀದಿಸಲು ಆದಾಯವಿರುವುದಿಲ್ಲ. ಶೆಲ್ ಕಂಪೆನಿ, ಬ್ಯಾಂಕ್ ಸಾಲ ಹಾಗೂ ಹಲವಾರು ವ್ಯಕ್ತಿಗಳ ಮೂಲಕ ವಹಿವಾಟು ನಡೆಸಿ ಈ ಆಸ್ತಿ ಖರೀದಿಸಲಾಗಿದೆ. ಆದರೆ, ಈ ಬ್ಯಾಂಕ್ ಸಾಲಗಳನ್ನು ಅತೀ ಶೀಘ್ರದಲ್ಲಿ ತೀರಿಸಲಾಗಿದೆ. ಜಾರ್ಜ್ ತಾವು ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಗಳಿಸಿರುವ ಹಣವನ್ನು ಮನಿ ಲ್ಯಾಂಡರಿಂಗ್ ಮೂಲಕ ವಿದೇಶಗಳಿಗೆ ವರ್ಗಾಯಿಸಿ ಅಕ್ರಮ ಆಸ್ತಿ ಖರೀದಿಸಿರುವ ಸಾಧ್ಯತೆಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.