ಕಲಬುರ್ಗಿ: ಸಿಎಎ-ಎನ್ಆರ್ಸಿ ವಿರೋಧಿಸಿ ಬೀದಿಗಿಳಿದ ವೈದ್ಯಕೀಯ ವಿದ್ಯಾರ್ಥಿಗಳು
ಕಲಬುರ್ಗಿ, ಜ.16: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್ಆರ್ಸಿ ಪ್ರಕ್ರಿಯೆ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗುರುವಾರ ಇಲ್ಲಿನ ಸರ್ದಾರ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಕೈಗೆ ಕಪ್ಪುಧರಿಸಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ, ಎನ್ಆರ್ಸಿ ಕೇವಲ ಮುಸ್ಲಿಮರ ಸಮಸ್ಯೆ ಅಲ್ಲ, ಈ ನೆಲದ ಸಮಸ್ಯೆ. ಈ ಹಿನ್ನೆಲೆಯಲ್ಲಿ ಜಾಗೃತಿ, ಅವಲೋಕನ, ದೇಶ ಮುನ್ನಡೆಸುವ ಚಿಂತನೆ ನಡೆಯಬೇಕಿದೆ. ಧರ್ಮ ಧರ್ಮಗಳ ಮಧ್ಯೆ ಗೋಡೆ ಕಟ್ಟಿ ರಾಜಕೀಯ ಮಾಡುವವರ ಹುನ್ನಾರ ಅರಿತುಕೊಳ್ಳಬೇಕಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸಿಎಎ, ಎನ್ಆರ್ಸಿ ಜನ ವಿರೋಧಿ ಕಾಯ್ದೆಗಳಾಗಿದ್ದು, ಕೇಂದ್ರ ಬಿಜೆಪಿ ಸರಕಾರ ಈ ಕಾಯ್ದೆ ಜಾರಿ ಮಾಡುವ ಮೂಲಕ ಧರ್ಮ ಒಡೆಯುವ ಪ್ರಯತ್ನ ನಡೆಸಿದೆ. ಈ ಕೂಡಲೇ ಕೇಂದ್ರ ಸರಕಾರ ಜನ ವಿರೋಧಿ ಕಾಯ್ದೆಯನ್ನು ಹಿಂಪಡೆಬೇಕೆಂದು ಒತ್ತಾಯ ಮಾಡಿದರು.
Next Story