ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀವು ಜೊತೆಗಿದ್ದರೆ ನನಗೆ ಆನೆ ಬಲ: ಜಿಲ್ಲಾಧಿಕಾರಿ ಬಿ. ಶರತ್
ಕಲಬುರಗಿ, ಜ.18: ಕಲಬುರಗಿಯಲ್ಲಿ ಫೆಬ್ರವರಿ 5, 6 ಮತ್ತು 7ರಂದು ನಡೆಯಲಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಸುಸೂತ್ರವಾಗಿ ನಡೆಸಲು ನನಗೆ ಜವಾಬ್ದಾರಿ ವಹಿಸಿದ್ದು, ಸಮ್ಮೇಳನದ ಯಶಸ್ಸಿಗೆ ನೀವು ಜೊತೆಗಿರುವ ಅಭಯ ನೀಡಿರುವುದರಿಂದ ನನಗೆ ನೂರಾನೆ ಬಲ ಬಂದಿದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ಹೇಳಿದ್ದಾರೆ.
ನಗರದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸಾಹಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನದ ಗೋಷ್ಠಿ ಇತ್ಯಾದಿಗಳೆಲ್ಲವೂ ಕಸಾಪ ಜವಾಬ್ದಾರಿಯಾಗಿದೆ. ನಮ್ಮದೇನಿದ್ದರೂ ವೇದಿಕೆಯ ಜವಾಬ್ದಾರಿ ಎಂದರು.
ಸಮ್ಮೇಳನಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿಯಿದ್ದು, ಯಾವುದೇ ರೀತಿಯ ತಯಾರಿ ಹಾಗೂ ಪ್ರಚಾರ ಕಂಡು ಬರುತ್ತಿಲ್ಲ. ನೆಪ ಮಾತ್ರಕ್ಕೆ ಮಾತ್ರ ಈ ಸಭೆ ನಡೆಸುತ್ತೀದ್ದೀರಿ. ಈ ಭಾಗದ ಎಲ್ಲರನ್ನೊಳಗೊಂಡ ಸಮ್ಮೇಳನ ಆಗಬೇಕು. ಅವಕಾಶವಿದ್ದರೆ ಇನ್ನೂ ಕೆಲವರನ್ನು ಸಮ್ಮೇಳನದಲ್ಲಿ ಬಳಸಿಕೊಳ್ಳಬೇಕು. ಏಕಪಕ್ಷೀಯ ನಿರ್ಣಯ ಸರಿಯಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಮಾತ್ರ ಸಮ್ಮೇಳನ ಯಶಸ್ವಿಯಾಗಬಲ್ಲದು. ಗೋಡೆ ಬರಹ, ಫ್ಲೆಕ್ಸ್ ಗಳಲ್ಲದೆ ಶಿಕ್ಷಣ ಇಲಾಖೆ ಮೂಲಕ ಎಲ್ಲ ಕಡೆ ಸಮ್ಮೇಳನದ ಬಗ್ಗೆ ಮಾಹಿತಿ ನೀಡುವಂತಾಗಬೇಕು ಮೊದಲಾದ ಅನೇಕ ಸಲಹೆಗಳನ್ನು ಸಭೆಯಲ್ಲಿ ಉಪಸ್ಥಿತರಿದ್ದ ಸಾಹಿತಿಗಳು ಜಿಲ್ಲಾಡಳಿತ ಮತ್ತು ಜಿಲ್ಲಾ ಕಸಾಪಕ್ಕೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಖಜಾಂಚಿ ದೌಲತರಾಯ ಪಾಟೀಲ ವೇದಿಕೆಯಲ್ಲಿದ್ದರು.
ಪ್ರೊ. ವಸಂತ ಕುಷ್ಟಗಿ, ಎಚ್.ಟೊ.ಪೋತೆ, ಮಹಿಪಾಲರೆಡ್ಡಿ ಮುನ್ನೂರು, ಸುರೇಶ ಬಡಿಗೇರ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಸ್ವಾಮಿರಾವ ಕುಲಕರ್ಣಿ, ಪ್ರೊ. ಕಲ್ಯಾಣ ರಾವ ಪಾಟೀಲ, ವಿಶಾಲಕ್ಷಿ ಕರೆಡ್ಡಿ, ಡಾ. ನಾಗಾಬಾಯಿ ಬುಳ್ಳಾ, ಡಾ. ಶ್ರೀಶೈಲ ಘೂಳಿ, ಸಿದ್ಧರಾಮ ಹೊನ್ಕಲ್, ಶಿವರಂಜನ್ ಸತ್ಯಂಪೇಟೆ, ಭೀಮಣ್ಣ ಬೋನಾಳ, ಡಾ. ಕಾಶಿನಾಥ ಅಂಬಲಗೆ, ಡಾ. ಅಪ್ಪಗೆರೆ ಸೋಮಶೇಖರ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.