ಅನ್ನದಾತರ ಮೇಲೆ ಯಾಕಿಷ್ಟು ನಿಷ್ಕರುಣೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಜ.22: ಬರಪೀಡಿತ ಪ್ರದೇಶಗಳ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಬಾರದು ಎಂಬ ಹಿಂದಿನ ಸರಕಾರದ ಆದೇಶವನ್ನು ಹಿಂಪಡೆದು ಸಾಲ ವಸೂಲಿಗೆ ಸರಕಾರ ಆದೇಶಿಸಿದೆ. ಯಡಿಯೂರಪ್ಪ ಅವರೆ, ನೆರೆ ಬರದಿಂದ ತತ್ತರಿಸಿ ಪರಿಹಾರ ಸಿಗದೆ ಕಂಗೆಟ್ಟಿರುವ ರೈತರ ಗಾಯದ ಮೇಲೆ ಬರೆ ಎಳೆಯುವಂತಹಾ ರೈತ ವಿರೋಧಿ ನಿಲುವು ಏಕೆ? ಅನ್ನದಾತರ ಮೇಲೆ ನಿಮಗೆ ಯಾಕಿಷ್ಟು ನಿಷ್ಕರುಣೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.
ಅಮಿತ್ ಶಾ ಅವರೆ, ‘ಟುಕ್ಡೇ ಟುಕ್ಡೇ ಗ್ಯಾಂಗ್ಗೆ ಪಾಠ ಕಲಿಸುವ ಸಮಯ ಬಂದಿದೆ’ ಎಂದು ನಿಮ್ಮ ಭಾಷಣದಲ್ಲಿ ಹೇಳಿದ್ದಿರಿ, ಈಗ ನಿಮ್ಮದೇ ಗೃಹ ಸಚಿವಾಲಯ ಆರ್ಟಿಐ ಅರ್ಜಿಗೆ ‘ಇಂತಹಾ ಯಾವುದೇ ಗ್ಯಾಂಗ್ ಇಲ್ಲ’ ಎಂಬ ಮಾಹಿತಿ ನೀಡಿದೆ. ಗೃಹ ಮಂತ್ರಿಗಳಾಗಿ ಸುಳ್ಳುಗಳನ್ನು ಹರಡುವುದು ಆ ಸ್ಥಾನದ ಘನತೆಗೆ ಶೋಭೆಯಲ್ಲ. ದೇಶದ ಜನತೆಯ ಕ್ಷಮೆ ಯಾಚಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ನೆರೆ ಪರಿಹಾರ ನೀಡುವಲ್ಲಿ ಸರಕಾರದ ನಿರ್ಲಕ್ಞ್ಯ, ಉದ್ಯೋಗ, ಆಹಾರ ನೀಡುವಲ್ಲಿ ವೈಫಲ್ಯದ ಪರಿಣಾಮ ಅನ್ನ ಅರಸಿ ಗುಳೆ ಬಂದ ನಮ್ಮದೇ ಉತ್ತರ ಕರ್ನಾಟಕದ ನೆಲದ ಬಡವರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ರಾಜ್ಯ ಬಿಜೆಪಿ ಸರಕಾರ, ನಮ್ಮದೇ ದೇಶದ ಬಡ ನಾಗರಿಕರ ಮೇಲೆ ಯುದ್ಧ ಸಾರುವ ಏಕೈಕ ಪಕ್ಷ ಬಿಜೆಪಿ ಎಂದು ಕಾಂಗ್ರೆಸ್ ಟೀಕಿಸಿದೆ.