ನಿರುದ್ಯೋಗದ ವಿರುದ್ಧ ಯುವ ಕಾಂಗ್ರೆಸ್ ಮಿಸ್ಕಾಲ್ ಅಭಿಯಾನ: ವ್ಯಾಪಕ ಬೆಂಬಲ
ಬೆಂಗಳೂರು, ಜ. 24: ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ ಯುವ ಕಾಂಗ್ರೆಸ್ ಘಟಕ ಕರೆ ನೀಡಿರುವ ಮಿಸ್ಕಾಲ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಸಿಎಎ, ಎನ್ಪಿಆರ್, ಎನ್ಆರ್ಸಿ ವಿರುದ್ಧ ಯುವ ಕಾಂಗ್ರೆಸ್ ಘಟಕ ನಿರುದ್ಯೋಗದ ವಿರುದ್ಧ ಸಮರ ಸಾರಿದ್ದು, ಯುವಜನರಿಂದ ಮಿಸ್ಕಾಲ್ ಅಭಿಯಾನಕ್ಕೆ ಮುಂದಾಗಿದೆ. 8151994411 ಸಂಖ್ಯೆಗೆ ನಿರುದ್ಯೋಗ ವಿರುದ್ಧ ಮಿಸ್ಕಾಲ್ ನೀಡುವಂತೆ ಕರೆ ನೀಡಿದೆ.
ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ರಾಜ್ಯದ ಎಲ್ಲ ಪ್ರಮುಖ ನಾಯಕರು ನಿರುದ್ಯೋಗಿ ನೋಂದಣಿ ಅಭಿಯಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಪೇಸ್ಬುಕ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾದರೆ, ಬಿಜೆಪಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೊಂದು ನಕಲಿ ಅಭಿಯಾನವಾಗಿದ್ದು, ಉದ್ಯೋಗದಲ್ಲಿರುವವರೇ ಮಿಸ್ಕಾಲ್ ನೀಡುತ್ತಾರೆ ಎಂದು ಬಿಜೆಪಿ ಬೆಂಬಲಿಗರು ಜರಿದಿದ್ದಾರೆ.