ವಿಧಾನಸೌಧದ ಬಳಿ ಬರುತ್ತೇನೆ, ಧೈರ್ಯವಿದ್ದರೆ ಕೊಲೆ ಮಾಡಲಿ: ಪ್ರೊ.ಕೆ.ಎಸ್.ಭಗವಾನ್ ಸವಾಲು
ಮೈಸೂರು,ಜ.25: ನನ್ನನ್ನು ಕೊಲೆ ಮಾಡಬೇಕು ಎನ್ನುವವರು ಸಮಯ, ದಿನಾಂಕವನ್ನು ನಿಗದಿಪಡಿಸಲಿ. ನಾನೇ ವಿಧಾನಸೌದದ ಬಳಿ ಬರುತ್ತೇನೆ. ಧೈರ್ಯವಿದ್ದರೆ ನನ್ನನ್ನು ಕೊಲೆ ಮಾಡಲಿ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಸವಾಲು ಹಾಕಿದ್ದಾರೆ.
ಕೊಲೆ ಬೆದರಿಕೆಗಳು ನನಗೆ ಹೊಸದೇನು ಅಲ್ಲ, ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬರುತ್ತಲೇ ಇದೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನನ್ನು ಕೊಲೆ ಮಾಡಬೇಕು ಎನ್ನುವವರು ಕಷ್ಟ ಪಡಬೇಕಿಲ್ಲ, ರಾಜ್ಯದ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಚಿವರು, ಶಾಸಕರ ಸಮ್ಮುಖದಲ್ಲಿ ನಾನು ವಿಧಾನಸೌಧದ ಮುಂದೆ ಬರುತ್ತೇನೆ. ವೀರಾಧಿ ವೀರರೇ ಆದರೆ ನನ್ನನ್ನು ಕೊಲೆ ಮಾಡಲಿ ಎಂದು ಹೇಳಿದರು.
ದೇಶಕ್ಕೆ ಅನುಕೂಲವಾಗಬೇಕು ಎಂಬ ದಿಸೆಯಲ್ಲಿ ನಾನು ಮಾತನಾಡುತ್ತಿದ್ದೇನೆ. ನಾನೇನು ಸಂವಿಧಾನದದ ಚೌಕಟ್ಟು ಮೀರಿ ಮಾತನಾಡಿಲ್ಲ, ಸಂವಿಧಾನದ ಅಡಿಯಲ್ಲೇ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಆದ್ದರಿಂದ ನನಗೆ ಯಾವುದೇ ಭಯವಿಲ್ಲ, ನನ್ನನ್ನು ಕೊಲ್ಲಬಹುದು ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ವ್ಯಕ್ತಿ ನಶ್ವರ, ವಿಚಾರ ಅಮರ ಎಂದು 'ವಾರ್ತಾಭಾರತಿ'ಗೆ ದೂರವಾಣಿ ಮೂಲಕ ತಿಳಿಸಿದರು.
ಕೊರಗಿ ಕೊರಗಿ ಸಾಯುವುದಕ್ಕಿಂತ ಇಂತಹ ರೀತಿಯಲ್ಲಿ ಸಾಯುವುದು ಒಳ್ಳೆಯದು ಎಂದು ಇದೇ ವೇಳೆ ಅಭಿಪ್ರಾಯಿಸಿದರು.