ಸಿಎಎ-ಎನ್ಆರ್ಸಿಗೆ ವಿರೋಧ: ದಾವಣಗೆರೆಯಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ ಮಹಿಳೆಯರು
ದಾವಣಗೆರೆ, ಫೆ.1: ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ಇಲ್ಲಿನ ಅಹಮದ್ ರಜಾ ಪಾರ್ಕ್ನಲ್ಲಿ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಬೆಂಬಲ ಬೆಲೆ ನಿಗದಿ, ವಿದೇಶದಿಂದ ಕಪ್ಪು ಹಣ ತರುವುದಾಗಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದೀರಿ, ಅದರೆ ಇದು ಯಾವುದನ್ನು ಮಾಡದೆ ಇಡೀ ದೇಶದ ಗಮನ ಬೇರಡೆ ಸೆಳೆಯಲು ಎನ್ಆರ್ಸಿ ಜಾರಿಗೆ ತಂದು ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ರಾಜಕಾರಣ ಮಾಡುವುದು ಕಾನೂನು ರೀತಿಯಲ್ಲಿ ಖಂಡಿಸುತ್ತೇವೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸಂವಿಧಾನ ವಿರೋಧಿಯಾಗಿದೆ. ಅಲ್ಲದೇ ಜಾತ್ಯತೀತ ದೇಶಕ್ಕೆ ಇದು ಸೂಕ್ತವಲ್ಲ. ಸಂವಿಧಾನ ಕಲಂ 14ರ ಪ್ರಕಾರ ಕಾನೂನಿನ ಮುಂದೆ ಎಲ್ಲ ಜನರು ಸಮಾನರು ಎಂಬುವುದನ್ನು ಸಿಎಎ ಒಪ್ಪುವುದಿಲ್ಲ. ಅನುಚ್ಚೇದ 29ರ ಪ್ರಕಾರ ಅಲ್ಪಸಂಖ್ಯಾತರ ಹಿತಾಸಕ್ತಿಗಳ ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಧರ್ಮ, ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವುದು ಸರಿಯಲ್ಲ. ಅದ್ದರಿಂದ ಈ ಕೂಡಲೇ ಎನ್ಆರ್ಸಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಉದ್ಯೋಗ ಕಲ್ಪಿಸಬೇಕು, ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು, 21 ಸಾವಿರ ವೇತನ ನಿಗದಿಗೊಳಿಸಬೇಕು, ಎನ್ಆರ್ಸಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಜಬೀನಾಖಾನಂ, ಕರಿಬಸಪ್ಪ, ಅಸ್ಗರ್, ಅನ್ವರ್, ಅವರಗೆರ ವಾಸು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.