ಹಿರಿಯ ರಾಜಕಾರಣಿ ಡಿ.ಮಂಜುನಾಥ್ ನಿಧನಕ್ಕೆ ಕುಮಾರಸ್ವಾಮಿ, ಕಾರಜೋಳ ಸಂತಾಪ
ಬೆಂಗಳೂರು, ಫೆ. 3: ಹಿರಿಯ ರಾಜಕಾರಣಿ ಡಿ.ಮಂಜುನಾಥ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿ.ಮಂಜುನಾಥ್ ಅವರು ಸಚಿವರಾಗಿ, ವಿಧಾನ ಪರಿಷತ್ತಿನ ಸಭಾಪತಿಯಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದರು. ಸರಳ ವ್ಯಕ್ತಿತ್ವದ ಪ್ರತಿರೂಪದಂತೆ ಇದ್ದರು. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಬಂಧು ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.
ರಾಜಕೀಯ ಮುತ್ಸದ್ದಿ ನಿರ್ಗಮನ: ಕಾರಜೋಳ
ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಿ.ಮಂಜುನಾಥ್ ಅವರು, ರಾಜ್ಯ ಸರಕಾರದಲ್ಲಿ ಹಣಕಾಸು, ಕಾರ್ಮಿಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಅರಣ್ಯ ಸಚಿವರಾಗಿ ದಕ್ಷ ಹಾಗೂ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಮರಿಸಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ. ಶ್ರೀಯುತರ ನಿಧನದಿಂದ ದಲಿತ ಮುಂದಾಳು ಹಾಗೂ ರಾಜಕೀಯ ಮುತ್ಸದ್ದಿ ಅವರನ್ನು ಕಳೆದುಕೊಂಡಂತೆ ಆಗಿದೆ ಎಂದು ಕಾರಜೋಳ ಸಂತಾಪ ಸೂಚಿಸಿದ್ದಾರೆ.