ಬಿಜೆಪಿಯವರು ತಾವು ಹೇಳಲಾಗದನ್ನು ಆರೆಸ್ಸೆಸ್ ಮೂಲಕ ಹೇಳಿಸುತ್ತಿದ್ದಾರೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು, ಫೆ. 9: ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ನಾವು ಗೆದ್ದಿರುವ ಒಂದು ಕ್ಷೇತ್ರವನ್ನು ಬಿಜೆಪಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರು ಚಡ್ಡಿ, ಪ್ಯಾಂಟ್, ಪಂಚೆ ಯಾವುದಾದರೂ ವೇಷದಲ್ಲಿ ಪಥ ಸಂಚಲನ ಮಾಡಿಕೊಳ್ಳಲಿ, ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಇಪ್ಪತ್ತೈದು ಸ್ಥಾನ ಗೆದ್ದಿದ್ದರೂ ತೃಪ್ತಿಯಾಗಿಲ್ಲ. ನಾವು ಹಾಗೂ ಜೆಡಿಎಸ್ನವರು ಗೆದ್ದಿರುವ ಒಂದೊಂದು ಕ್ಷೇತ್ರಗಳಲ್ಲಿ ವಿನಾಕಾರಣ ಏನೇನೋ ಪ್ರಯತ್ನ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ. ಆರೆಸ್ಸೆಸ್ ಸಿದ್ಧಾಂತ ಏನೂ ಅಂತಾ ನನಗೂ ಗೊತ್ತಿದೆ. ಬಿಜೆಪಿಯವರು ತಾವು ಹೇಳಲಾಗದನ್ನು ಆರೆಸ್ಸೆಸ್ ಮೂಲಕ ಹೇಳಿಸುತ್ತಿದ್ದಾರೆ. ಕೇವಲ ಒಂದು ಜಾತಿ-ಧರ್ಮದ ಪರವಾಗಿ ಹಾಗೂ ಬೇರೆ ಧರ್ಮಗಳ ಮೇಲೆ ಯುದ್ಧ ಮಾಡುತ್ತೇವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ರಾಮನಗರದಲ್ಲಿ ಪಥ ಸಂಚಲನಕ್ಕೆ ಎಷ್ಟು ಜನ ಬಂದಿದ್ದರು, ಯಾವ ಕಡೆಯಿಂದ ಎಷ್ಟು ವಾಹನ ಬಂದಿದ್ದವು. ಯಾರೆಲ್ಲಾ ಬಂದಿದ್ದರು ಎಂಬುದನ್ನು ನಮ್ಮ ಜಿಲ್ಲೆ ಪೊಲೀಸರು ವಿಡಿಯೋ ಮಾಡಿಸಿ ಇಟ್ಟಿದ್ದಾರೆ. ಇದರಿಂದ ನಮಗೆ ತೊಂದರೆ ಇಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಇಪ್ಪತ್ತೈದು ಕ್ಷೇತ್ರಗಳನ್ನು ಗೆದ್ದ ಮಾತ್ರಕ್ಕೆ ಕಾರ್ಯಕರ್ತರು ಕುಗ್ಗುವ ಅಥವಾ ಆತಂಕ ಪಡುವ ಅಗತ್ಯವಿಲ್ಲ. ನಾವು ಸ್ವಲ್ಪಯಾಮಾರಿದೆವು. ರಾಜಕೀಯ ಚದುರಂಗವನ್ನು ನಾವು ಹಾಗೂ ಜೆಡಿಎಸ್ನವರು ಸರಿಯಾಗಿ ಆಡಿದ್ದರೆ, ಬಿಜೆಪಿಗೆ 10 ಸೀಟು ಬರುತ್ತಿರಲಿಲ್ಲ. ನಮ್ಮ ತಪ್ಪುಗಳನ್ನು ನಾವು ಸರಿ ಮಾಡಿಕೊಳ್ಳುತ್ತೇವೆ. ಏನು ಮಾಡಬೇಕು, ರಾಜಕಾರಣ ಹೇಗೆ ಮಾಡಬೇಕೆಂದು ಗೊತ್ತಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ನಡೆದ ಹಲವು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಜನ ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ. ಮಹಾರಾಷ್ಟ್ರದಲ್ಲಿ ಸಂಖ್ಯೆ ಇತ್ತಾದರೂ ಅವರ ನೀತಿ ವಿರೋಧಿಸಿ ಶಿವಸೇನೆ ಅವರನ್ನು ಬಿಟ್ಟು ಬಂದರು. ಹರಿಯಾಣದಲ್ಲೂ ಬೇರೆಯವರನ್ನು ಸೇರಿಸಿಕೊಂಡರು. ಉತ್ತರದ ರಾಜ್ಯಗಳಲ್ಲಿ ಒಂದೊಂದೇ ಕಡೆ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದರು.
ಅವರು ಚುನಾವಣೆ ಹೇಗೆ ಮಾಡಿದರು ಎಂದು ನನಗೆ ಗೊತ್ತಿಲ್ವಾ? ಅವರು ಸತ್ಯ ಹರಿಶ್ಚಂದ್ರರು ಕೇವಲ 27ಲಕ್ಷ ರೂ.ನಲ್ಲೇ ಚುನಾವಣೆ ಮಾಡಿ ಮುಗಿಸಿದರಾ? ಮಾಧ್ಯಮಗಳಲ್ಲೇ ಅವರು ಎಷ್ಟು ದುಡ್ಡು ಖರ್ಚು ಮಾಡಿದ್ದರೆಂದು ವರದಿ ಬಂದಿತ್ತು. ಚುನಾವಣಾ ಆಯೋಗ ಏನು ಮಾಡುತ್ತಿತ್ತು, ಐಟಿ ಇಲಾಖೆ ಕಣ್ಣು ಮುಚ್ಚಿಕೊಂಡು ಕೂತಿತ್ತಾ? ಕೇವಲ ಹಾಸನ, ಶಿವಮೊಗ್ಗ, ಮಂಡ್ಯದಲ್ಲಿ ಮಾತ್ರ ದಾಳಿಮಾಡಿದ್ದೇಕೆ? ಎಂದು ಪ್ರಶ್ನಿಸಿದರು.
ಜನ ರೊಚ್ಚಿಗೆದ್ದು ಪ್ರತಿಭಟನೆ ಮಾಡುತ್ತಿದ್ದ ವೇಳೆ ಅವರನ್ನು ತಡೆಯಲು ಕುಮಾರಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ನಾವೆಲ್ಲ ಸೇರಿದ್ದಾಗ ನಮ್ಮ ಮೇಲೆ ಸುಮ್ಮನೆ ಕೇಸ್ ಹಾಕಿಸಿದರು. ಈ ಸುಳ್ಳು ಕೇಸು, ಜೈಲಿಗೆಲ್ಲ ಹೆದರಿ ನಾವು ರಾಜಕೀಯ ಮಾಡುವುದಿಲ್ಲ. ನಮ್ಮ ಪಕ್ಷಕ್ಕೆ ಅದರದೇ ಆದ ಇತಿಹಾಸ, ತ್ಯಾಗ, ಬಲಿದಾನ ಇದೆ. ನಮ್ಮ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಕೊಟ್ಟು ಈ ದೇಶಕ್ಕೆ ಪ್ರಜಾಪ್ರಭುತ್ವ ತಂದುಕೊಟ್ಟಿದ್ದಾರೆ. ಆ ಪ್ರಜಾಪ್ರಭುತ್ವದಲ್ಲಿ ಅವರಿಗೆ ಅಧಿಕಾರ ಸಿಕ್ಕಿದೆ ಎಂದು ಶಿವಕುಮಾರ್ ಕಿಡಿಕಾರಿದರು.
‘ಸಿಎಎ ಹಾಗೂ ಎನ್ಆರ್ಸಿ ವಿಚಾರವಾಗಿ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಮಾಡಿಸುತ್ತಿದೆಯೇ? ಇಲ್ಲ. ಕೇಂದ್ರ ಸರಕಾರದ ಧೋರಣೆ ವಿರುದ್ಧ ಜನ ಸಿಟ್ಟಿಗೆದ್ದು ಸ್ವಯಂ ಪ್ರೇರಣೆಯಿಂದ ಬೀದಿಗಿಳಿದು ಚಳವಳಿ ನಡೆಸುತ್ತಿದ್ದಾರೆ’
-ಡಿ.ಕೆ.ಶಿವಕುಮಾರ್