ದಿಲ್ಲಿಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಫೆ.11: ಲೋಕಸಭೆ ಚುನಾವಣೆ ನಂತರ ಬಿಜೆಪಿ ಎಲ್ಲ ಚುನಾವಣೆಗಳನ್ನು ಸೋಲುತ್ತಿದ್ದು, ಹಿಂದುತ್ವಕ್ಕೆ ಜನತೆ ಬೆಂಬಲ ನೀಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಬಿಜೆಪಿ ಮೇಲಿನ ಕೋಪಕ್ಕೆ ದಿಲ್ಲಿ ಜನತೆ ಆಪ್ಗೆ ಮತ ನೀಡಿದ್ದು, ರಾಷ್ಟ್ರದ ಜನತೆ ಬಿಜೆಪಿ ಮುಕ್ತ ಮಾಡಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ದಿಲ್ಲಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿಲ್ಲಿ ಚುನಾವಣೆ ಕಾಂಗ್ರೆಸ್ ನಾಲ್ಕೈದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ದಿಲ್ಲಿಯ ಜನತೆ ಮುಖ್ಯಮಂತ್ರಿ ಕ್ರೇಜಿವಾಲ್ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಸೇರಿದಂತೆ 69ರಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷವೇ ಮುನ್ನಡೆ ಗಳಿಸಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
‘ದರಿದ್ರ ಸರಕಾರ’ ಎಂಬ ನನ್ನ ಹೇಳಿಕೆ ಸಂಬಂಧ ಸಿಎಂ ಬಿಎಸ್ವೈ ಹಾಗೂ ಬಿಜೆಪಿ ಮುಖಂಡರ ಎಲ್ಲ ಪ್ರತಿಕ್ರಿಯೆಗಳಿಗೂ ನಾನು ಅಧಿವೇಶನದಲ್ಲೇ ಉತ್ತರ ನೀಡುತ್ತೇನೆ ಎಂದ ಅವರು, ಬೆಳಗಾವಿಯಲ್ಲಿ ಸದನ ನಡೆಸಲು ಬಿಜೆಪಿಗೆ ಹೆದರಿಕೆ ಎಂದು ಟೀಕಿಸಿದರು.
‘ದಿಲ್ಲಿಯ ಜನತೆ ಸರ್ವಾಧಿಕಾರಿ ಧೋರಣೆಗೆ ಪೆಟ್ಟುಕೊಟ್ಟಿದ್ದು, ಆಪ್ಗೆ ಮತ ನೀಡಿದ್ದಾರೆ. ಕ್ರೇಜಿವಾಲ್ಗೆ ಅಭಿನಂದನೆಗಳು. ನಮ್ಮ ಪಕ್ಷ ಸೋಲನ್ನು ಒಪ್ಪಿಕೊಳ್ಳುತ್ತದೆ. ಪಕ್ಷವನ್ನು ಬೇರೆ ಮಟ್ಟದಲ್ಲಿ ಸಂಘಟಿಸಬೇಕು. ಜತೆಗೆ ಅಧಿಕಾರಕ್ಕಾಗಿ ಪಕ್ಷದಲ್ಲಿರುವವರನ್ನ ಕೈಬಿಟ್ಟ್ಟು, ಪಕ್ಷ ಸಂಘಟಿಸುವವರಿಗೆ ಅವಕಾಶ ನೀಡಬೇಕು’
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ