ಊಟ ಮಾಡಿ ಮಲಗಿದ್ದ ಇಬ್ಬರು ಬಾಲಕಿಯರು ನಿಗೂಢ ಸಾವು
ಹನೂರು, ಫೆ.14: ತಂದೆ- ತಾಯಿಯೊಂದಿಗೆ ಊಟ ಮಾಡಿ ಮಲಗಿದ್ದ ಇಬ್ಬರು ಬಾಲಕಿಯರು ಮಧ್ಯರಾತ್ರಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಸಿರಗೂಡು ಗ್ರಾಮದಲ್ಲಿ ನಡೆದಿದೆ.
ಸಿರಗೂಡು ಗ್ರಾಮದ ನಿವಾಸಿ ಬಾಲಾಜಿ ನಾಯ್ಕ ಎಂಬವರ ಮಕ್ಕಳಾದ ಲಕ್ಷ್ಮಿ (6) ಹಾಗೂ ಕೀರ್ತಿ (11)ಮೃತಪಟ್ಟವರು. ಬಾಲಾಜಿ ನಾಯ್ಕ ಅವರಿಗೆ ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರನಿದ್ದು, ರಾತ್ರಿ ವೇಳೆ ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ಮಲಗಿದ ಕೆಲವೇ ಕ್ಷಣಗಳಲ್ಲಿ ಕೀರ್ತಿ ಹಾಗೂ ಲಕ್ಷ್ಮಿ ತಮಗೆ ತೀವ್ರ ತಲೆನೋವು, ಸುಸ್ತು ಎಂದು ಪೋಷಕರಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರು ಮಕ್ಕಳಿಗೂ ಕುಡಿಯಲು ನೀರು ಕೊಟ್ಟು ಮಲಗಿಸಿದ್ದಾರೆ. ಆದರೆ ಕೆಲ ನಿಮಿಷಗಳ ಬಳಿಕ ಮಕ್ಕಳ ಮೂಗಿನಲ್ಲಿ ನೊರೆ ಕಾಣಿಸಿಕೊಂಡಿದ್ದು, ನಂತರ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರು ಬಾಲಕಿಯರ ಸಾವಿಗೆ ಕಾರಣ ನಿಗೂಢವಾಗಿದ್ದು, ತನಿಖೆಯ ಬಳಿಕವಷ್ಟೇ ಸ್ಪಷ್ಟ ಕಾರಣ ತಿಳಿದುಬರಬೇಕಿದೆ. ಮಕ್ಕಳ ಮೃತದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಕ್ಕಳ ಸಾವಿಗೆ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳನಾಗಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಮಂಜುನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.