ಅತ್ಯಾಚಾರಕ್ಕೆ ಯತ್ನ ಆರೋಪ ಸತ್ಯಕ್ಕೆ ದೂರ: ಸ್ಪಷ್ಟನೆ
ಮಡಿಕೇರಿ, ಫೆ.18: ಎಮ್ಮೆಮಾಡು ತಾಜುಲ್ಲಾ ಇಸ್ಲಾಂ ಜಮಾಅತ್ನ ಅಧ್ಯಕ್ಷರಾಗಿರುವ ಕೆ.ಎಸ್.ಅಬ್ದುಲ್ ಖಾದರ್ ಹಾಜಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಅತ್ಯಾಚಾರ ಯತ್ನದ ಆರೋಪವನ್ನು ಹೊರಿಸಲಾಗಿದೆ ಎಂದು ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಎಂದು ಅಬ್ದುಲ್ ಖಾದರ್ ಅವರ ಸಹೋದರ ಕೆ.ಎಸ್.ಅಬೂಬಕ್ಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ಜಮಾಅತ್ನ ಅಧ್ಯಕ್ಷರಾಗಿರುವ ಕೆ.ಎಸ್.ಅಬ್ದುಲ್ ಖಾದರ್ ಅವರು, ತಮ್ಮ ಮನೆಯ ಮೇಲಂತಸ್ತನ್ನು ಮಾಸಿಕ 2 ಸಾವಿರ ರೂ. ಬಾಡಿಗೆಗೆಂದು ಶರೀಫ್ ಎಂಬವರಿಗೆ ನೀಡಿದ್ದರು. ಕಳೆದ ಏಳು ವರ್ಷಗಳಿಂದ ಶರೀಫ್, ಅವರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ. ಆದರೆ ಇತ್ತೀಚೆಗೆ ಏಳು ತಿಂಗಳಿನಿಂದ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ. ಇದೀಗ ಅತ್ಯಾಚಾರ ಯತ್ನದ ಆರೋಪ ಮಾಡುತ್ತಿದ್ದಾರೆ ಎಂದು ಅಬೂಬಕ್ಕರ್ ಆರೋಪಿಸಿದರು.
ಕೆ.ಎಸ್.ಅಬ್ದುಲ್ ಖಾದರ್ ಹಾಜಿ ಅವರಿಗೆ ಸೊಂಟದಲ್ಲಿ ಗಾಯವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ತಮ್ಮ ಮಗಳ ವಿವಾಹ ಸಮಾರಂಭಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿ ಹಾಗೂ ಮಗಳು ಸದಾ ಮನೆಯಲ್ಲೇ ಇರುತ್ತಾರೆ. ಆದರೂ ಊಟ ನೀಡಲು ಬಂದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಶುದ್ಧ ಸುಳ್ಳು ಹೇಳಿರುವುದಾಗಿ ಅಬೂಬಕ್ಕರ್ ಅಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮತ್ತೊಬ್ಬ ಸಹೋದರ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.