ಮಡಿಕೇರಿ: ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರ ಶವ ಪತ್ತೆ
ಮಡಿಕೇರಿ, ಫೆ.18: ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮುಳುಗುತ್ತಿದ್ದ ಕಾರ್ಮಿಕ ಸೇರಿದಂತೆ, ಆತನ ರಕ್ಷಣೆಗೆ ಧಾವಿಸಿದ ಮತ್ತೊಬ್ಬ ಯುವಕ ಸೇರಿ ಇಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಬಳಿಯ ತೆರಾಲು ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಈಶಾನ್ಯ ರಾಜ್ಯ ಮೂಲದ ಕಾರ್ಮಿಕ ವಿನೋದ್(22) ಮತ್ತು ಪುಟ್ಟ(22) ಎಂಬವರು ಸಾವನ್ನಪ್ಪಿದ್ದು, ಮಂಗಳವಾರ ಬೆಳಗ್ಗೆ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆಯಲಾಯಿತು.
ತೆರಾಲು ಗ್ರಾಮದ ಬೊಳ್ಳೇರ ಪೊನ್ನಪ್ಪ ಎಂಬವರ ಕಾಫಿ ತೋಟದ ಕೆರೆಯಲ್ಲಿ ಸೋಮವಾರ ಸಂಜೆಯ ವೇಳೆ ಸ್ನಾನಕ್ಕೆಂದು ತೆರಳಿದ್ದ ವಿನೋದ್ ಆಯತಪ್ಪಿ ಕೆರೆಯ ಆಳಪ್ರದೇಶಕ್ಕೆ ಬಿದ್ದು ಮುಳುಗಲಾರಂಭಿಸಿದ್ದ. ಇದನ್ನು ಗಮನಿಸಿದ ಅಲ್ಲೇ ಸಮೀಪದಲ್ಲಿದ್ದ ಕಾರ್ಮಿಕ ಪುಟ್ಟ ತಕ್ಷಣ ರಕ್ಷಣೆಗೆ ಮುಂದಾದನಾದರೂ, ದುರದೃಷ್ಟವಶಾತ್ ಆತನೂ ನೀರಿನಲ್ಲಿ ಮುಳುಗುವುದರೊಂದಿಗೆ ದುರ್ಘಟನೆ ಸಂಭವಿಸಿತ್ತು.
ವಿಷಯವರಿತ ಪೊಲೀಸರು, ಸ್ಥಳೀಯ ಮುಳುಗು ತಜ್ಞರ ಸಹಕಾರದೊಂದಿಗೆ ಸಂಜೆಯ ಕತ್ತಲಲ್ಲಿ ಮೃತದೇಹಗಳಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದರಾದರು ಪ್ರಯೋಜನವಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ನಡೆಸಿದ ಶೋಧ ಕಾರ್ಯದಲ್ಲಿ ಮೃತದೇಹಗಳು ಪತ್ತೆಯಾಗಿ, ಹೊರತೆಗೆಯಲಾಯಿತು.
ಮೃತ ವಿನೋದ್ ಅವಿವಾಹಿತನಾಗಿದ್ದರೆ, ಪುಟ್ಟ ವಿವಾಹಿತನಾಗಿದ್ದಾನೆ. ಇವರು ಕಾಫಿ ಕೆಲಸಕ್ಕೆಂದು ಕೊಡಗಿಗೆ ಆಗಮಿಸಿ ತೆರಾಲು ಗ್ರಾಮದ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಗೆ ಸಂಬಂಧಿಸಿದಂತೆ ಶ್ರೀಮಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.