ಎಐಎಂಐಎಂ ನಾಯಕ ವಾರಿಸ್ ಪಠಾಣ್ ವಿರುದ್ಧ ಕಲಬುರಗಿಯಲ್ಲಿ ಎಫ್ಐಆರ್
ಪ್ರಚೋದನಕಾರಿ ಭಾಷಣ ಆರೋಪ
ಕಲಬುರಗಿ, ಫೆ.22: ವಿವಾದಿತ ಹೇಳಿಕೆ ಆರೋಪ ಸಂಬಂಧ ಎಐಎಂಐಎಂ ಪಕ್ಷದ ಮಾಜಿ ಶಾಸಕ ವಾರಿಸ್ ಯೂಸೂಫ್ ಪಠಾಣ್ ವಿರುದ್ಧ ಇಲ್ಲಿಯ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆ.15ರಂದು ಇಲ್ಲಿನ ಪೀರ್ ಬಂಗಾಲಿ ಮೈದಾನದಲ್ಲಿ ಎನ್ಪಿಆರ್, ಸಿಎಎ, ಎನ್ಆರ್ಸಿ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಚೋದನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ನ್ಯಾಯವಾದಿ ಶ್ವೇತಾ ಸಿಂಗ್ ನೀಡಿದ ದೂರಿನ ಅನ್ವಯ ಐಪಿಸಿ ಕಲಂ 117, 153 ಹಾಗೂ 153ಎ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಕೂಟ ರಚನೆ, ವರ್ಗಗಳ ಮಧ್ಯೆ ದ್ವೇಷ ಹುಟ್ಟಿಸುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಪಠಾಣ್ಗೆ ಶನಿವಾರ ನೋಟಿಸ್ ಕಳಿಸಲಾಗಿದೆ. ಅಗತ್ಯ ಬಿದ್ದರೆ ಅವರನ್ನು ವಿಚಾರಣೆಗೂ ಕರೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಹೇಳಿದ್ದು ಏನು?: ಈಗ ನಮ್ಮ ಸಿಂಹಿಣಿಯರು ಮಾತ್ರ ಹೊರಗೆ ಬಂದಿದ್ದಾರೆ. ಅಷ್ಟಕ್ಕೇ ಅವರಿಗೆ ಬೆವರು ಬರುತ್ತಿದೆ. ನಾವೆಲ್ಲರೂ ಬಂದು ನಿಂತರೆ ಅವರ ಕತೆ ಏನು? ಮುಸ್ಲಿಮರ ಜನಸಂಖ್ಯೆ 15 ಕೋಟಿ ಇರಬಹುದು. ಆದರೆ, ಅಗತ್ಯಬಿದ್ದರೆ 100 ಕೋಟಿ ಬಹುಸಂಖ್ಯಾತರಿಗೆ ತಕ್ಕ ತಿರುಗೇಟು ನೀಡುತ್ತಾರೆ ಎಂದು ವಾರಿಸ್ ಯೂಸೂಫ್ ಪಠಾಣ್ ಅಂದಿನ ಸಮಾವೇಶದಲ್ಲಿ ಹೇಳಿದ್ದರು ಎನ್ನಲಾಗಿದೆ.