ಭೂಗತ ಪಾತಕಿ ರವಿ ಪೂಜಾರಿ ಕರ್ನಾಟಕಕ್ಕೆ ?
ಬೆಂಗಳೂರು, ಫೆ.23: ದಕ್ಷಿಣ ಆಫ್ರಿಕಾ ಸೆನೆಗಲ್ ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿ ಅನ್ನು ಕರ್ನಾಟಕಕ್ಕೆ ಕರೆತರಲು ಹಿರಿಯ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ಹಿರಿಯ ಪೊಲೀಸ್ ಅಧಿಕಾರಿಗಳಾದ ಅಮರ್ ಕುಮಾರ್ ಪಾಂಡೆ, ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತರಲಿದೆ. ಈ ಸಂಬಂಧ ಆರೋಪಿಯನ್ನು ಹಸ್ತಾಂತರಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.
90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಿಂದ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 26, ಮಂಗಳೂರಿನಲ್ಲಿ 29 ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
2019ರ ಜ.19ರಂದು ಸೆನೆಗಲ್ ನಲ್ಲಿ ರವಿ ಪೂಜಾರಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಸದ್ಯ ಆತ ಬುರ್ಕಿನೋ ಫಾಸೊ ನಾಗರಿಕ ಎಂದು ಹೇಳಿಕೊಂಡು ಆಂಥೋಣಿ ಫರ್ನಾಂಡಿಸ್ ಎಂಬ ಹೆಸರಿನಲ್ಲಿ ಅಲ್ಲಿನ ಪೌರತ್ವ ಪಡೆದು ಕೊಂಡಿದ್ದ. ಆದರೆ, ಈಗ ಹಸ್ತಾಂತರಕ್ಕೆ ಯಾವ ಕಾನೂನು ತೊಡಕುಗಳು ಇಲ್ಲದ ಕಾರಣ ಆತ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.