ವಕ್ಫ್ ಗೌರವಧನ ದುರುಪಯೋಗವಾದರೆ ಕ್ರಮ: ವಕ್ಫ್ ಮಂಡಳಿ ಸದಸ್ಯ ಶಾಫಿ ಸಅದಿ
ಗದಗ: ಆರ್ಥಿಕವಾಗಿ ದುರ್ಬಲರಾಗಿರುವ, ಕಡಿಮೆ ವೇತನಕ್ಕೆ ದುಡಿಯುತ್ತಿರುವ ಪೇಶ್ ಇಮಾಮ್ ಮತ್ತು ಮುಅಝ್ಝಿನ್ ಗಳಿಗೆ ಕರ್ನಾಟಕ ವಕ್ಫ್ ಇಲಾಖೆಯಿಂದ ನೀಡಲಾಗುತ್ತಿರುವ ಗೌರವಧನವು ಅರ್ಹ ಫಲಾನುಭವಿಗಳಿಗೆ ಸಂದಾಯವಾಗಬೇಕು. ಅದರ ದುರುಪಯೋಗವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕ್ಫ್ ಮಂಡಳಿ ಸದಸ್ಯ, ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹೇಳಿದ್ದಾರೆ.
ಅವರು ಇಂದು ಗದಗ ಜಿಲ್ಲಾ ಮುಸ್ಲಿಮ್ ಜಮಾಅತ್ ರಚನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಸಮುದಾಯದ ನೈತಿಕತೆಯ ಉಳಿವಿಗಾಗಿ ಅಹೋರಾತ್ರಿ ದುಡಿಯುತ್ತಿರುವ ಇಮಾಮ್ ಹಾಗೂ ಮುಅಝ್ಝಿನ್ ಗಳಿಗೆ ಪ್ರೋತ್ಸಾಹಕರವಾಗಲಿ ಎಂಬ ಸದುದ್ದೇಶದೊಂದಿಗೆ ಈ ಗೌರವಧನ ವಿತರಿಸಲಾಗುತ್ತಿದೆ. ಆದರೆ ಕೆಲವೆಡೆ ಮೊಹಲ್ಲಾ ಆಡಳಿತ ಸಮಿತಿಗಳು ನೀಡುತ್ತಿರುವ ನಿಗದಿತ ವೇತನದಲ್ಲಿ ವಕ್ಫ್ ಇಲಾಖೆಯಿಂದ ನೀಡಲಾಗುವ ಗೌರವಧನದ ಮೊತ್ತವನ್ನು ಕಡಿತಗೊಳಿಸುತ್ತಿರುವ ಹಾಗೂ ವ್ಯಾಜ್ಯ ಪ್ರಮಾಣಪತ್ರ ಸಲ್ಲಿಸಿ ದುರುಪಯೋಗಪಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಂಬಂಧಪಟ್ಟ ಜಿಲ್ಲಾ ವಕ್ಪ್ ಸಲಹಾ ಸಮಿತಿಗೆ ಈ ಬಗ್ಗೆ ಸೂಚನೆಯನ್ನು ನೀಡಲಾಗಿದ್ದು, ಅಂತಹ ಮೊಹಲ್ಲಾ ಆಡಳಿತ ಸಮಿತಿಗಳ ವಿರುದ್ಧ ತನಿಖೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪೇಶ್ ಇಮಾಮ್ ಹಾಗೂ ಮುಅಝ್ಝಿನ್ ಗಳಿಗೆ ಮೊಹಲ್ಲಾ ಆಡಳಿತ ಮಂಡಳಿಯ ನಿಗದಿತ ವೇತನವನ್ನು ಯಥಾಪ್ರಕಾರ ನೀಡಬೇಕಾಗಿದ್ದು, ವಕ್ಫ್ ಬೋರ್ಡ್ ನಿಂದ ನೀಡಲಾಗುತ್ತಿರುವುದು ಹಣ ಪ್ರತ್ಯೇಕ ಗೌರವಧನ ಎಂದು ಅವರು ಹೇಳಿದರು.
ಈ ವೇಳೆ ರಾಜ್ಯ ವಕ್ಫ್ ಸದಸ್ಯ ಯಾಕೂಬ್ ಯೂಸುಫ್ ಶಿವಮೊಗ್ಗ ಜೊತೆಯಲ್ಲಿದ್ದರು.