ದೊರೆಸ್ವಾಮಿಯವರು ವೀರ ಸಾವರ್ಕರ್ ರಷ್ಟು ದೊಡ್ಡ ಹೋರಾಟಗಾರರೇ: ಶಾಸಕ ಯತ್ನಾಳ್ ಪ್ರಶ್ನೆ
“ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’’
ಶಿವಮೊಗ್ಗ, ಫೆ.27: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಷ್ಟು ದೊರೆಸ್ವಾಮಿ ದೊಡ್ಡ ಹೋರಾಟಗಾರರೇ? ದೊರೆಸ್ವಾಮಿ ಕಾಂಗ್ರೆಸ್ನ ಮುಖವಾಣಿಯಂತೆ ವರ್ತಿಸುತ್ತಾರೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಂದು ಮತ್ತೆ ಕಿಡಿಕಾರಿದ್ದಾರೆ
ಶಿವಮೊಗ್ಗದಲ್ಲಿಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಇತ್ತೀಚೆಗೆ ನೀಡಿರುವ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಸಾವರ್ಕರ್ ದೇಶ ಕಂಡ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ. ಅವರ ಹಾಗೆ ಇವರು ಅಂಡಮಾನ್ ಜೈಲಿಗೆ ಹೋಗಿದ್ದಾರೆಯೇ ಎಂದು ದೊರೆಸ್ವಾಮಿಯ ಕುರಿತು ಪ್ರಶ್ನಿಸಿದ ಯತ್ನಾಳ್, ಯಾವ ಹೋರಾಟ, ಎಲ್ಲಿ ಹೋರಾಟ ಮಾಡಿದ್ದಾರೆ. ದೊರೆಸ್ವಾಮಿ ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುತ್ತಾರೆ, ನರೇಂದ್ರ ಮೋದಿಯನ್ನು ಸೋಲಿಸುವಂತೆ ಕರೆ ನೀಡುತ್ತಾರೆ, ಸಿಎಎ ಅನ್ನು ವಿರೋಧ ಮಾಡುತ್ತಾರೆ ಎಂದು ಕಿಡಿಕಾರಿದರು.
ವೀರ ಸಾವರ್ಕರ್ ದೇಶ ಕಂಡ ಅಪರೂಪದ ಸ್ವಾತಂತ್ರ್ಯ ಹೋರಾಟಗಾರರು. ಅವರ ಬಗ್ಗೆ ಕಾಂಗ್ರೆಸ್ನವರು ಬಹಳಷ್ಟು ಕೀಳಾಗಿ ಮಾತನಾಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಮೊದಲು ಕ್ಷಮಾಪಣೆ ಕೇಳಲಿ. ಆ ನಂತರ ನಾನು ಪ್ರತಿಕ್ರಿಯಿಸುತ್ತೇನೆ. ಸಾವರ್ಕರ್ ವಿರುದ್ಧ ಕಾಂಗ್ರೆಸ್ ನವರು ಹಗುರವಾಗಿ ಮಾತನಾಡಿದ್ದು, ಅದಕ್ಕಿಂತಲೂ ಕೆಟ್ಟ ಶಬ್ದಗಳಿಂದ ಇನ್ನೂ ನಾವು ಮಾತನಾಡಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲೂ ತಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ` ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು.