ಮೈಸೂರು: ಪಾಲಿಕೆ ಸಭೆಯಲ್ಲಿ ಸದ್ದು ಮಾಡಿದ ದೊರೆಸ್ವಾಮಿ ವಿರುದ್ಧದ ಹೇಳಿಕೆ
ಆಡಳಿತ - ಪ್ರತಿಪಕ್ಷಗಳ ನಡುವೆ ವಾಗ್ವಾದ
ಮೈಸೂರು,ಫೆ.27: ಮೈಸೂರು ಮಹಾನಗರ ಪಾಲಿಕೆಯಲ್ಲಿಂದು ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಸಭೆಯ ಪ್ರಾರಂಭದಲ್ಲೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಹೇಳಿಕೆ ಪ್ರಕರಣ ಸದ್ದು ಮಾಡಿತು.
ನೂತನ ಆಡಳಿತ ಪಕ್ಷದ ನಾಯಕ ಆಯೂಬ್ ಖಾನ್ ರಿಂದ ವಿಷಯ ಪ್ರಸ್ತಾಪವಾಗಿದ್ದು, ಸಭೆಯಲ್ಲಿ ಈ ವಿಷಯಕ್ಕೆ ಅವಕಾಶವಿಲ್ಲವೆಂದು ವಿರೋಧ ಪಕ್ಷದ ನಾಯಕರು ವಾಗ್ವಾದಕ್ಕಿಳಿದರು. ಅಪ್ರತಿಮ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಈ ವಿಚಾರದ ನಿರ್ಣಯ ಮಂಡಿಸುವಂತೆ ಆಡಳಿತ ಪಕ್ಷದ ನಾಯಕ ಅಯೂಬ್ ಖಾನ್ ಪಟ್ಟು ಹಿಡಿದರು.
ಸಭೆಯಲ್ಲಿ ವಿಚಾರದ ನಿರ್ಣಯ ಮಂಡನೆ ವಿರುದ್ಧ ವಿರೋಧ ಪಕ್ಷದ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಈ ವಿಚಾರ ಕೈ ಬಿಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಬಿಜೆಪಿ ಸದಸ್ಯರನ್ನು ಸ್ವಾತಂತ್ರ್ಯ ಹೋರಾಟಗಾರರ ವಿರೋಧಿಗಳು ಎಂದು ಅಯೂಬ್ ಖಾನ್ ವಾಗ್ದಾಳಿ ನಡೆಸಿದರು.
ಕೌನ್ಸಿಲ್ ಸಭೆ ಆರಂಭದಲ್ಲೇ ಗದ್ದಲ ಕೇಳಿ ಬಂದಿದ್ದು, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಪಾಲಿಕೆ ಸದಸ್ಯ ಮಾ.ವಿ ರಾಮಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ಫಲಾನುಭವಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಮೇಯರ್ ತಸ್ನೀಂ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ರಾಮಪ್ರಸಾದ್ ಮಾತಿಗೆ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭೆ ಆರಂಭವಾಗಲು ಅವಕಾಶ ಕೊಡಿ, ಸಾಮಾನ್ಯ ವಿಚಾರ ಬಂದಾಗ ಚರ್ಚೆ ಮಾಡಿ ಎಂದು ಇತರ ಸದಸ್ಯರು ಹೇಳಿದರು.
ಸಭೆಯ ಆರಂಭದಲ್ಲಿ ಕೋರಂ ಅಭಾವವಿದ್ದುದರಿಂದ ಸಭೆಯನ್ನು ಅರ್ಧಗಂಟೆಗಳ ಕಾಲ ಮುಂದೂಡಲಾಗಿತ್ತು. ಸಭೆಯಲ್ಲಿ ಉಪಮೇಯರ್ ಶ್ರೀಧರ್, ಪಾಲಿಕೆ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.