ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪ: ಐವರ ಬಂಧನ
ಶಿವಮೊಗ್ಗ, ಫೆ.28: ಮಾರಕಾಸ್ತ್ರಗಳೊಂದಿಗೆ ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸಿ ಹೊಂಚು ಹಾಕಿ ಕುಳಿತಿದ್ದ ಆರೋಪದಲ್ಲಿ ಐವರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಹಿರೀಸಾವೆಯ ಎಂ.ಎನ್ ಲಯನ್ ಅಲಿಯಾಸ್ ಸಿಂಹ (23), ನಿಖಿಲ್ (23), ಸುಬ್ಬನಹಳ್ಳಿಯ ಸಿ. ಕೌಶಿಕ್ ಕುಮಾರ್ (23), ಬೆಂಗಳೂರಿನ ಸಂಜೀವಿನಿನಗರ ನಿವಾಸಿ ಮಧುಸೂಧನ್ (19) ಹಾಗೂ ವಿಜಯನಗರದ ಅರ್ಜುನ್ (22) ಬಂಧಿತ ಆರೋಪಿಗಳು.
ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಎಚ್.ಕೆ. ಜಂಕ್ಷನ್ನ ರಾಮಿನಕೊಪ್ಪ ಕ್ರಾಸ್ ಬಳಿ ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರಿಂದ 7 ಲಕ್ಷ ರೂ. ಮೌಲ್ಯದ ಕಾರು, 30,500 ರೂ. ಮೌಲ್ಯದ 8 ಗ್ರಾಂನ 3 ಚಿನ್ನದ ಉಂಗುರ ಹಾಗೂ ಮಂಡ್ಯ ಜಿಲ್ಲೆಯ ಬೆಳಕವಾಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಸ್ವತ್ತನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.