ರೇವೂರ್ ಗೆ ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ಕೊಡಿಸುತ್ತೇವೆ: ಸಿಎಂ ಬಿಎಸ್ವೈಗೆ ಸ್ವಾಮೀಜಿ ಎಚ್ಚರಿಕೆ
ಕಲಬುರ್ಗಿ, ಫೆ. 28: ಇಲ್ಲಿನ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರಗೆ ಸಚಿವ ಸ್ಥಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕಾಗುತ್ತದೆ ಎಂದು ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಎಚ್ಚರಿಸಿದ್ದಾರೆ.
ಶುಕ್ರವಾರ ದತ್ರಾತ್ರೇಯ ಪಾಟೀಲ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸ್ವಾಮೀಜಿ, ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ರೇವೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ನಾಯಿಯೂ ಕೇಳುತ್ತಿರಲಿಲ್ಲ: ಇಪ್ಪತ್ತು ವರ್ಷಗಳ ಹಿಂದೆ ಕಲಬುರ್ಗಿಯಲ್ಲಿ ಬಿಜೆಪಿ ಅಂದರೆ ಯಾವ ನಾಯಿಯೂ ಕೇಳುತ್ತಿರಲಿಲ್ಲ. ಆದರೆ, ಇಂದು ದತ್ತಾತ್ರೇಯ ಪಾಟೀಲ್ ಅವರ ತಂದೆ ಚಂದ್ರಶೇಖರ್ ಪಾಟೀಲ್ ತಮ್ಮ ಆಸ್ತಿ ಮಾರಾಟ ಮಾಡಿ ಪಕ್ಷವನ್ನು ಕಟ್ಟಿದ್ದಾರೆ. ಮಂತ್ರಿ ಆಗಬೇಕೆನ್ನುವ ಅವರ ಕನಸು ನನಸಾಗಲಿಲ್ಲ. ಈಗ ಅವರ ಪುತ್ರ ಕಲಬುರ್ಗಿ ದಕ್ಷಿಣ ಕ್ಷೇತ್ರದಿಂದ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರಿಗೆ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ನೀಡಬೇಕು. ಇಲ್ಲವಾದರೆ ಶಾಸಕ ಸ್ಥಾನಕ್ಕೆ ಅವರಿಗೆ ರಾಜೀನಾಮೆ ನೀಡಿ ಎಂದು ನಾನು ಸಲಹೆ ಮಾಡುತ್ತೇನೆ ಎಂದು ಸ್ವಾಮೀಜಿ ಗುಡುಗಿದರು.
ಯಡಿಯೂರಪ್ಪನವರು ಇನ್ನೂ ಮೂರು ವರ್ಷ ಸಿಎಂ ಆಗಿರುತ್ತಾರೆ. ಆ ಬಳಿಕ ನಡೆಯುವ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ಯಡಿಯೂರಪ್ಪ ಬಳಿಕ ಮತ್ಯಾವ ಲಿಂಗಾಯತ ನಾಯಕರು ಸಿಎಂ ಆಗುವುದಿಲ್ಲ ಎಂದು ಸ್ವಾಮೀಜಿ ಇದೇ ವೇಳೆ ಭವಿಷ್ಯ ನುಡಿದರು.