ಕ್ಷಮೆ ಕೇಳದಿದ್ದರೆ ಶಾಸಕ ಯತ್ನಾಳ್ ವಿರುದ್ಧ ಹೋರಾಟ: ದಸಂಸ ಎಚ್ಚರಿಕೆ
ಬೆಂಗಳೂರು, ಫೆ. 28: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ಕ್ಷಮೆ ಕೋರಬೇಕು. ಇಲ್ಲವಾದರೆ ಯತ್ನಾಳ್ ವಿರುದ್ಧ ಚಳವಳಿ ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ದೊರೆಸ್ವಾಮಿ ಹೋರಾಟದ ವಯಸ್ಸು ಯತ್ನಾಳ್ಗೆ ಇಲ್ಲ, ಸ್ವಾತಂತ್ರದ ಇತಿಹಾಸ ಮೊದಲು ತಿಳಿಯಲಿ. ಸ್ವಾತಂತ್ರ್ಯ ಚಳವಳಿ ಗಂಧವೆ ಗೊತ್ತಿಲ್ಲದ ಸಂತತಿಯ ಯತ್ನಾಳ್, ಮೋದಿ, ಅಮಿತ್ ಶಾ ಮೆಚ್ಚಿಸಲು ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧ ಮಾಡುವವರು ಇವರ ದೃಷ್ಟಿಯಲ್ಲಿ ನಕಲಿ ಸ್ವಾತಂತ್ರ್ಯ ಹೋರಾಟಗಾರರು. ಬಿಜೆಪಿಯವರು ಕೂಡಲೇ ಯತ್ನಾಳ್ರನ್ನು ಉಚ್ಛಾಟಿಸಬೇಕು. ತಮ್ಮ ಹೇಳಿಕೆಗಳನ್ನು ಒಮ್ಮೆ ನೆನಪಿಸಿಕೊಳ್ಳಲಿ. ಆಗ ಬಿಜೆಪಿ ಕೋಮುವಾದಿ, ಜಾತಿವಾದಿ. ಈಗ ಬಿಜೆಪಿ ಸಚಿವರನ್ನಾಗಿ ಮಾಡಲಿಲ್ಲ. ಹೀಗಾಗಿ ಹತಾಶರಾಗಿ ಪ್ರಚಾರಕ್ಕಾಗಿ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆಂದು ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ವಾಗ್ದಾಳಿ ನಡೆಸಿದ್ದಾರೆ.