ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದದ್ದೇ ಆರೆಸ್ಸೆಸ್ನ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ: ಎಸ್.ಆರ್. ಹಿರೇಮಠ
ಎಸ್.ಆರ್. ಹಿರೇಮಠ
ಬಾಗಲಕೋಟೆ, ಫೆ.29: ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದೆ ಆರೆಸ್ಸೆಸ್ನ ಸ್ವಾತಂತ್ರ ಹೋರಾಟದ ಹಿನ್ನೆಲೆಯಾಗಿದೆ. ಇಂತಹವರು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಮಾತನಾಡುವುದಕ್ಕೆ ಯಾವ ಅರ್ಹತೆ ಇದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಿರೇಮಠ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಿಗೆ ಸಾಕ್ಷಿಪ್ರಜ್ಞೆಯಾಗಿರುವ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಬಸನಗೌಡ ಯತ್ನಾಳರ ಉದ್ಧಟತನದ ಹೇಳಿಕೆ ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ಈ ರೀತಿ ಬೇಜವಾಬ್ದಾರಿಯಾಗಿ ನಾಲಿಗೆ ಬಳಸುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಹೋರಾಟಕ್ಕಿಳಿಯೇಕಾಗುತ್ತದೆ ಎಂದು ಎಚ್ಚರಿಸಿದರು.
ದೇಶ ವಿಭಜನೆ ಹಾಗೂ 80ರ ದಶಕದ ಸಿಖ್ ಗಲಭೆಯ ನಂತರ ದೆಹಲಿಯಲ್ಲಿ ಅತಿ ದೊಡ್ಡ ಗಲಭೆ ನಡೆದಿದೆ. ಈ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ನಾಚಿಕೆ, ಮಾನಮರ್ಯಾದೆ ಇದ್ದರೆ ಕೇಂದ್ರ ಗೃಹ ಸಚಿವ ಅಮಿಶ್ ಶಾ ತಕ್ಷಣ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕಿತ್ತು ಹಾಕಲಿ ಎಂದರು.
ಕೇಂದ್ರ ಸರಕಾರ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನು ರಾತ್ರೋರಾತ್ರಿ ವರ್ಗಾವಣೆಗೊಳಿಸಿರುವುದು ನೋಡಿದರೆ 70ರ ದಶಕದ ಮಧ್ಯಭಾಗದ ತುರ್ತು ಪರಿಸ್ಥಿತಿ ಮತ್ತೆ ಜಾರಿಯಾಗಿರುವುದು ಖಾತ್ರಿಯಾಗಿದೆ. ಇದರ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ ಹೋರಾಟ ಆಗುವ ಎಲ್ಲ ಲಕ್ಷಣವೂ ಕಾಣುತ್ತಿದೆ ಎಂದು ಅವರು ತಿಳಿಸಿದರು.