ಕೋಲಾರ: ಸಕಲ ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ
ಕೋಲಾರ: ಹುತಾತ್ಮ ಯೋಧ ಪ್ರಶಾಂತ್ರವರ ಅಂತ್ಯಕ್ರಿಯೆ ಯೋಧನ ಹುಟ್ಟೂರಿನ ಕಣಂಬೆಲೆ ಗ್ರಾಮದಲ್ಲಿ ಮಧ್ಯಾಹ್ನ 2.00 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ನೇರವೇರಿಸಲಾಯಿತು.
ಇಂದು ಬೆಳಿಗ್ಗೆ ಬಂಗಾರಪೇಟೆ ಸಾರ್ವಜನಿಕ ಅಸ್ಪತ್ರೆಯಿಂದ ಜೂನಿಯರ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯ ವರೆಗೆ ಅನುವು ಮಾಡಿಕೊಡಲಾಯಿತು. ತಾಯಿ ಲಕ್ಷಮ್ಮ ಅವರು ಅಂತಿಮ ದರ್ಶನ ಪಡೆದರು. ಬೆಳಿಗ್ಗೆ 10.00 ಗಂಟೆಗೆ ಬಂಗಾರಪೇಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಸಾರ್ವಜನಿಕರು ಆಗಮಿಸಿ ಯೋಧನಿಗೆ ಗೌರವ ಸಲ್ಲಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಮುನಿಸ್ವಾಮಿ, ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ ನಂಜೇಗೌಡ, ಜಿಲ್ಲಾ ಪಂಚಾಯತ್ನ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್, ಪ್ರಭಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ದರ್ಶನ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಮುಹಮ್ಮದ್ ಸುಜೀತಾ, ಉಪ ವಿಭಾಗಾಧಿಕಾರಿಗಳಾದ ವಿ. ಸೋಮಶೇಖರ್ ಹುತಾತ್ಮ ಯೋಧನ ಅಂತಿಮ ದರ್ಶನವನ್ನು ಪಡೆದುಕೊಂಡು ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.