ಕುಮಾರಸ್ವಾಮಿ ಮತ್ತೆರಡು ಬಾರಿ ಸಿಎಂ ಆಗಬಹುದು: ಶಾಸಕ ಜಿ.ಟಿ.ದೇವೇಗೌಡ
ಮೈಸೂರು,ಮಾ.8: ಕುಮಾರಸ್ವಾಮಿ ಅವರಿಗೆ ಇನ್ನೂ ವಯಸ್ಸಿದೆ. ಅವರೂ ಸಹ ಮತ್ತೆರಡು ಬಾರಿ ಮುಖ್ಯಮಂತ್ರಿ ಆಗಬಹುದು. ದೈವ ಬಲ ಇದ್ದರೆ ಆಗಬಹುದು ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಜಿ.ಟಿ ದೇವೇಗೌಡ ಅವರು, ಕುಮಾರಸ್ವಾಮಿ ಮತ್ತು ನಾವು ಹೇಗಿದ್ದೆವೋ ಹಾಗೆಯೇ ಇದ್ದೇವೆ. ನಾವು ಚೇಂಜ್ ಆಗಿಲ್ಲ. ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ, ಮೂರು ವರ್ಷ ಅವಧಿ ಇನ್ನೂ ಇದೆ. ಇಡೀ ದೇಶದಲ್ಲಿ ರಾಜಕೀಯ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಕಾರ್ಯಕರ್ತರು ಗಟ್ಟಿಯಾಗಿದ್ದು ಪಕ್ಷ ಗಟ್ಟಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ದೈವ ಬಲವಿದೆ, ಹಾಗಾಗಿ ಕುಮಾರಸ್ವಾಮಿ ಸಿಎಂ ಆದರು. ಎಲ್ಲರೂ ಅವಕಾಶಕ್ಕೆ ಬೇರೆ ಪಕ್ಷಕ್ಕೆ ಹೋಗ್ತಾರೆ. ಎಲ್ಲರೂ ಅಧಿಕಾರಕ್ಕೋಸ್ಕರ ಹೋಗ್ತಾರೆ, ಇದನ್ನು ಜನರೂ ಒಪ್ಪುತ್ತಾರೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಕುಮಾರಸ್ವಾಮಿ ಅವರಿಗೆ ಇನ್ನು ವಯಸ್ಸಿದೆ ಅವರೂ ಸಹ ಮತ್ತೆರಡು ಬಾರಿ ಮುಖ್ಯಮಂತ್ರಿ ಆಗಬಹುದು ಎಂದು ತಿಳಿಸಿದರು.
ರಾಜ್ಯ ಬಜೆಟ್ ಬಗ್ಗೆ ಆಡಳಿತ ಪಕ್ಷದ ಶಾಸಕರಿಂದಲೇ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲದ ಪರಿಣಾಮ ಈ ರೀತಿ ಆಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಕಡಿತವಾಗಿದೆ. ನಾನು ಸಹ ರಿಂಗ್ ರೋಡ್ ಅಭಿವೃದ್ಧಿಗೆ 100 ಕೋಟಿ ಅನುದಾನ ಕೇಳಿದ್ದೆ, ಆದರೆ ಕೊಟ್ಟಿಲ್ಲ. ಉಮೇಶ್ ಕತ್ತಿ ಕೂಡ ಅವರ ಭಾಗಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ. ಆದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಾಗ ಈ ರೀತಿ ಆಗುತ್ತದೆ ಎಂದರು.
ಪ್ರಸಕ್ತ ಸನ್ನಿವೇಶದಲ್ಲಿ ಬಿಜೆಪಿ ಕಾಂಗ್ರೆಸ್, ಜೆಡಿಎಸ್ ನವರಿಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಈಗ ನಡೆಯುತ್ತಿರುವುದು ಅಧಿಕಾರ ರಾಜಕೀಯ ಮಾತ್ರ. ಇದನ್ನು ಜನರೂ ಒಪ್ಪಿಕೊಂಡಿದ್ದಾರೆ. ಯಾರಿಗೂ ಪ್ರಿನ್ಸಿಪಲ್ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ. ಮೂರು ವರ್ಷ ಎಲ್ಲಿಗೂ ಹೋಗಲು ಆಗುವುದಿಲ್ಲ. ಮೂರು ವರ್ಷ ಜೆಡಿಎಸ್ ನಲ್ಲೇ ಇರುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟನೆ ನೀಡಿದರು.