ಬಾಗೇಪಲ್ಲಿ: ವಿಷ ಸೇವಿಸಿ ಮೂವರು ಆತ್ಮಹತ್ಯೆ
ಬಾಗೇಪಲ್ಲಿ, ಮಾ.14: ತಾಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಹೊರವಲಯದ ಚೆಕ್ ಡ್ಯಾಂ ಬಳಿ ಇಬ್ಬರು ಮಹಿಳೆಯರು ಮತ್ತು ಓರ್ವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡ ಕೆರೆಗುಂಬೆಯ ವಾಸಿ ಗಂಗರಾಜು(35), ಗುಡಿಬಂಡೆ ತಾಲೂಕಿನ ಧೂಮಕುಂಟಹಳ್ಳಿ ಗ್ರಾಮದ ಶಿವಮ್ಮ(26) ಅಂದಾರ್ಲಹಳ್ಳಿಯ ಗಾಯಿತ್ರಿ(35) ಮೃತರು ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಎಲ್ಲರೂ ಜತೆಯಲ್ಲಿ ಊಟ ಮಾಡಿದ ಬಳಿಕ ವಿಷ ಸೇವಿಸಿದ್ದಾರೆ. ವಿಷ ಸೇವಿಸಿ ನರಳಾಡುತ್ತಿರುವುದನ್ನು ಕಂಡ ಮೃತ ಶಿವಮ್ಮನ ಮಕ್ಕಳಾದ ಕಿರಣ್ ಮತ್ತು ಪಲ್ಲವಿ ಎಂಬವರು ಘಟನಾ ಸ್ಥಳದಿಂದ ಸ್ವಲ್ಪದೂರ ಇರುವ ಕೊಂಡರೆಡ್ಡಿಪಲ್ಲಿಗೆ ತೆರಳಿ ಗ್ರಾಮಸ್ಥರ ಮೊಬೈಲ್ ಪಡೆದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದರು. ಶಿವಮ್ಮ ಮತ್ತು ಗಾಯಿತ್ರಿ ಸಹೋದರಿಯರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪ್ರಭಾರಿ ಜಿಲ್ಲಾ ರಕ್ಷಣಾಧಿಕಾರಿ ಜಾಹ್ನವಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಿಪಿಐ ನಯಾಝ್ ಬೇಗ್, ಪಿಎಸ್ಸೈ ಜಿ.ಕೆ.ಸುನಿಲ್ ಕುಮಾರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.