ಕೊರೋನಾ ವೈರಸ್ ಭೀತಿ: ಬಂಡೀಪುರ ಪ್ರವೇಶ ನಿರ್ಬಂಧ
ಸಫಾರಿ - ರೆಸಾರ್ಟ್ ಖಾಲಿ ಖಾಲಿ
ಗುಂಡ್ಲುಪೇಟೆ,ಮಾ,15: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್ ಹಾಗೂ ರೆಸಾರ್ಟ್ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ನೀಡಿದ್ದಾರೆ.
ಸಾರ್ವಜನಿಕರ ಮತ್ತು ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಮಾರ್ಚ್ 15ರಿಂದ 22ರ ವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್, ರೆಸಾರ್ಟ್ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂಡೀಪುರ ಸಫಾರಿ ನೋಡಲು ಆಗಮಿಸುತ್ತಿದ್ದರು. ಈಗ ಕೊರೋನಾ ವೈರಸ್ ಭೀತಿಯಿಂದ ಸಫಾರಿ ಕೌಂಟರ್ ನಲ್ಲಿ ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ.
23ವರ್ಷಗಳು ನಂತರ ಬಂಡೀಪುರ ಸಫಾರಿ ಬಂದ್ ಮಾಡಲಾಗಿರುವುದು ಇದೇ ಮೊದಲು.
ಜಿಲ್ಲಾಧಿಕಾರಿಗಳು ಆದೇಶದಂತೆ ಹಾಗೂ ಪ್ರವಾಸಿಗರ ದೃಷ್ಟಿಯಿಂದ ಒಂದು ವಾರಗಳ ಕಾಲ ನಿರ್ಬಂಧಿಸಲಾಗಿದೆ. ಇದರಿಂದಾಗಿ ಆದಾಯದಲ್ಲಿ ದೊಡ್ಡಮಟ್ಟದ ಪರಿಣಾಮ ಉಂಟಾಗಿದೆ .
-ಎನ್.ಎಂ.ನವೀನ್ಕುಮಾರ್, ವಲಯ ಅರಣ್ಯಾಧಿಕಾರಿ, ಗೋಪಾಲಸ್ವಾಮಿ ಬೆಟ್ಟ
ಕೊರೋನ ವೈರಸ್ ನಿಂದಾಗಿ ಪ್ರವಾಸೋದ್ಯಮ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಈ ಬಾರಿ 30ರಿಂದ 40ರಷ್ಟು ನಷ್ಟ ಉಂಟಾಗಿದೆ. ನಮ್ಮಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ
-ಗುರುರಾಜ್ ಆಚಾರ್, ಜನರಲ್ ಮ್ಯಾನೇಜರ್, ಕಂಟ್ರಿ ಕ್ಲಬ್ ರೆಸಾರ್ಟ್