ಪಡಿತರ ಅಕ್ಕಿ ಅಕ್ರಮ ದಾಸ್ತಾನು: ನಾಲ್ವರ ಬಂಧನ
ಮೈಸೂರು,ಮಾ.20: ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮು ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರಿನ ಲಷ್ಕರ್ ಮೊಹಲ್ಲಾ ನಿವಾಸಿ ಶಕ್ಲೀನ್ ಷರೀಫ್(26), ರಾಜೀವ್ ನಗರ 2ನೇ ಹಂತದ ನಯಾಜ್(34), ಮಂಡಿಮೊಹಲ್ಲಾದ ಇಶಾನ್ ಬೇಗ್(31), ಸತ್ಯನಗರದ ಜಮೀರ್ ಪಾಷ(38)ಎಂದು ಗುರುತಿಸಲಾಗಿದೆ. ಬಂಧಿತರಿಂದ 49.61 ಕ್ವಿಂಟಾಲ್ ಅಕ್ಕಿ, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಒಂದು ಹೊಲಿಗೆ ಯಂತ್ರ, 4000 ರೂ. ನಗದು, ಒಂದು ಟಾಟಾ ಇಎಕ್ಸ್ ಗೂಡ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ಸರ್ಕಾರದಿಂದ ಬಡವರಿಗೆ ವಿತರಣೆಯಾಗುವ ಪಡಿತರ ಅಕ್ಕಿಯನ್ನು ಲಷ್ಕರ್ ಮೊಹಲ್ಲಾದ 21ನೇ ವೆಸ್ಟ್ ಕ್ರಾಸ್ ನಲ್ಲಿರುವ ಜಾಬೇರ್ ಷರೀಫ್ ಎಂಬವರಿಗೆ ಸೇರಿದ ಮಳಿಗೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಬಳಿಕ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ಸಲುವಾಗಿ ಟಾಟಾ ಇಎಕ್ಸ್ ಗೂಡ್ಸ್ ವಾಹನಕ್ಕೆ ತುಂಬುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story