ರಜಾ ದಿನಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಬದಲು ಆಹಾರ ಪದಾರ್ಥ ನೀಡಲು ಶಿಕ್ಷಣ ಇಲಾಖೆ ಆದೇಶ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.21: ಕೊರೋನ ಭೀತಿ ಹಿನ್ನೆಲೆಯಲ್ಲಿ ರಜಾ ದಿನಗಳಲ್ಲೂ ಬಿಸಿಯೂಟದ ಬದಲು ಆಹಾರ ಪದಾರ್ಥ ವಿತರಣೆಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೊರೋನ ಭೀತಿ ಹಿನ್ನೆಲೆ ಶಾಲೆಗೆ ರಜೆ ನೀಡಲಾಗಿದೆ, ಆದರೆ ರಜಾ ದಿನಗಳಲ್ಲೂ ಮಧ್ಯಾಹ್ನದ ಬಿಸಿಯೂಟದ ಬದಲು ಆಹಾರ ಪದಾರ್ಥವನ್ನು ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ವಿತರಣೆ ಮಾಡುವಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಿಸಿಯೂಟಕ್ಕಾಗಿ ಮಕ್ಕಳು-ಪೋಷಕರು ಪ್ರತಿನಿತ್ಯ ಶಾಲೆಗೆ ಬರಬೇಕು, ಅಲ್ಲದೇ ಗುಂಪು ಗುಂಪಾಗಿ ಬರುವುದರಿಂದ ಕೊರೋನ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವಿತರಿಸುವ ಆಹಾರ ಪದಾರ್ಥ: 1 ರಿಂದ 5 ತರಗತಿ ಮಕ್ಕಳಿಗೆ ಪ್ರತಿನಿತ್ಯ 100 ಗ್ರಾಂ ಅಕ್ಕಿ, 50 ಗ್ರಾಂ ತೊಗರಿಬೇಳೆ ನೀಡಬೇಕು. 6 ರಿಂದ 10 ನೇ ತರಗತಿ ಮಕ್ಕಳಿಗೆ ಪ್ರತಿನಿತ್ಯ 150 ಗ್ರಾಂ ಅಕ್ಕಿ, 75 ಗ್ರಾಂ ತೊಗರಿಬೇಳೆ ನೀಡಬೇಕು. ಈ ರೀತಿಯ ಲೆಕ್ಕಾಚಾರ ಮಾಡಿ ಒಂದೇ ಬಾರಿ ಆಹಾರ ಪದಾರ್ಥ ವಿತರಣೆ ಮಾಡಬೇಕು ಎಂದು ಆದೇಶಿಸಲಾಗಿದೆ.
ಜೊತೆಗೆ ಆಹಾರ ವಿತರಣೆ ವೇಳೆ ಮಕ್ಕಳ ಹೆಸರನ್ನು ನಮೂದಿಸಿಕೊಂಡು ಪೋಷಕರಿಂದ ಸಹಿ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.