ಎಂಇಐಎಲ್ನಿಂದ ಕರೋನ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ
ಬೆಂಗಳೂರು, ಮಾ, 27: ಕರೋನಾ ವೈರಸ್ನಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮೇರೆಗೆ ರಾಷ್ಟ್ರದ ಪ್ರತಿಷ್ಠಿತ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಎಂಇಐಎಲ್, ಸಿಎಂ ಪರಿಹಾರ ನಿಧಿಗೆ ಎರಡು ಕೋಟಿ ರೂ.ಗಳ ದೇಣಿಗೆ ನೀಡಿದೆ.
ದೇಶದ ನೀರಾವರಿ, ವಿದ್ಯುತ್, ಇಂಧನ, ವೈಮಾನಿಕ ಸೇರಿದಂತೆ ಹಲವು ಉದ್ದಿಮೆಗಳಲ್ಲಿ ತೊಡಗಿಕೊಂಡಿರುವ ಮೆಘಾ ಇಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾ ರಾಜ್ಯಗಳಿಗೂ ದೇಣಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ.
ರಾಜ್ಯದಲ್ಲಿ ಕರೋನಾ ಪೀಡಿತರ ಚಿಕಿತ್ಸೆ ಮತ್ತು ಕರೋನಾದಿಂದ ಉದ್ಭವಿಸಿರುವ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುತ್ತಿರುವ ಸರ್ಕಾರದ ಕರೆಗೆ ಓಗೊಟ್ಟಿರುವ ಎಂ.ಇ.ಐ.ಎಲ್ ಸಂಸ್ಥೆಯು ಶುಕ್ರವಾರ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂಪಾಯಿಗಳ ದೇಣಿಗೆಯನ್ನು ಆರ್ಟಿಜಿಎಸ್ ಮೂಲಕ ವರ್ಗಾಯಿಸಿದೆ.
ಸಿಎಂ ಅಭಿನಂದನೆ: ತಮ್ಮ ಕರೆಗೆ ಓಗೊಟ್ಟು ಪರಿಹಾರ ನಿಧಿಗೆ 2 ಕೋಟಿ ರೂಪಾಯಿಗಳನ್ನು ಆರ್ಟಿಜಿಎಸ್ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಂಇಐಎಲ್ ಸಂಸ್ಥೆಯನ್ನು ಖುದ್ದು ಅಭಿನಂದಿಸಿದ್ದಾರೆ. ಹಣ ವರ್ಗಾವಣೆ ನಂತರ ಸಂಸ್ಥೆಯ ನಿರ್ದೇಶಕ ಸುಬ್ಬಯ್ಯ ಅವರಿಗೆ ದೂರವಾಣಿ ಕರೆ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸಂಸ್ಥೆಯ ಮಾನವೀಯ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.