ಶಿವಮೊಗ್ಗ: ಹೊತ್ತಿ ಉರಿದ ಮಂಡಕ್ಕಿ ಅಂಗಡಿ
ಶಿವಮೊಗ್ಗ, ಮಾ.30: ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಇರುವ ಅಂಗಡಿಯಲ್ಲಿ ರವಿವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಕೆಲವೇ ನಿಮಿಷದಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಮೂವರ ಪ್ರಾಣ ಉಳಿದಿದೆ.
ದೇಗುಲದ ಮುಂದೆ ಇರುವ ಮಂಡಕ್ಕಿ ಅಂಗಡಿಯಲ್ಲಿ ರಾತ್ರಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ‘ಶಾರ್ಟ್ ಸರ್ಕ್ಯೂಟ್’ನಿಂದಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ತಿಳಿದು ಬಂದಿದೆ. ಕೆಲವೇ ನಿಮಿಷದಲ್ಲಿ ಬೆಂಕಿ ಜೋರಾಗಿ ಹೊತ್ತು ಉರಿದಿದೆ. ಇದರಿಂದ ಅಂಗಡಿಯಲ್ಲಿದ್ದ ಎರಡು ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ವಸ್ತುಗಳು ಧಗಧಗ ಹೊತ್ತು ಉರಿದಿವೆ. ಸುಮಾರು ಏಳು ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಂಡಕ್ಕಿ ಅಂಗಡಿಯು ರಾಧಾಕೃಷ್ಣ ಕಾಮತ್ ಮತ್ತು ಗಣಪತಿ ಕಾಮತ್ ಎಂಬುವವರಿಗೆ ಸೇರಿದೆ. ಅಂಗಡಿ ಇದ್ದ ಕಟ್ಟಡದಲ್ಲೇ ಎರಡು ಕುಟುಂಬ ವಾಸವಿತ್ತು. ರಾಧಾಕೃಷ್ಣ ಕಾಮತ್ ಅಂಗಡಿಯ ಹಿಂಭಾಗದಲ್ಲಿ ವಾಸವಾಗಿದೆ. ಗಣಪತಿ ಕಾಮತ್ ಅವರ ಕುಟುಂಬ ಅಂಗಡಿಯ ಮೇಲ್ಭಾಗದಲ್ಲಿ ಇತ್ತು. ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಅವರ ಕುಟುಂಬವನ್ನು ಅಗ್ನಿಶಾಮಕ ದಳದ ಸಹಾಯದಿಂದ ರಕ್ಷಿಸಲಾಗಿದೆ.
ಅಗ್ನಿಶಾಮಕ ದಳದ ಡಿಎಫ್ಒ ಅಶೋಕ್ ಕುಮಾರ್, ಸಿಬ್ಬಂದಿಯಾದ ಹುಲಿಯಪ್ಪ, ಬಿ.ಟಿ.ನಾಗೇಶ್, ಆನಂದಪ್ಪ, ವಿಷ್ಣು ನಾಯ್ಕ್, ವಿನಯ್ ಕುಮಾರ್, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.