ಪೌರ ಕಾರ್ಮಿಕರ ರಕ್ಷಣೆಗೆ ವಿಶೇಷ ನೀತಿ ರೂಪಿಸಿ: ಹೈಕೋರ್ಟ್
ಬೆಂಗಳೂರು, ಮಾ.31: ರಾಜ್ಯದ ಪೌರ ಕಾರ್ಮಿಕರಿಗೆ ಕೈಕವಚ, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡುವ ಕುರಿತು ಸರಕಾರ ವಿಶೇಷ ನೀತಿಯೊಂದನ್ನು ರಚಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಹೇಳಿದೆ.
ಪೌರ ಕಾರ್ಮಿಕರ ರಕ್ಷಣೆಗಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಸ್ವೀಕರಿಸಿದ ಪತ್ರಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಸರಕಾರ ಪೌರ ಕಾರ್ಮಿಕರ ರಕ್ಷಣೆಗಾಗಿ ವಿಶೇಷ ನೀತಿಯೊಂದನ್ನು ರಚಿಸುವ ಅವಶ್ಯಕತೆ ಎಂದು ಹೇಳಿತು.
ಪೌರ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ವಿಸ್ತರಿಸಲು ಪುರಸಭೆ ಅಧಿಕಾರಿಗಳಿಗೆ ರಾಜ್ಯ ಸರಕಾರ ನಿರ್ದೇಶನ ನೀಡಲಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದ್ದು, ಪೌರ ಕಾರ್ಮಿಕರಿಗಾಗಿ ಸಾರಿಗೆ ವ್ಯವಸ್ಥೆ ಮಾಡುವುದೂ ಅವಶ್ಯಕವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಗಮ್ ಬೂಟ್ಸ್, ರೇನ್ ಕೋಟ್, ಕೈಕವಚ, ಗುರುತಿನ ಚೀಟಿ ಸೇರಿ ಇನ್ನಿತರ ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ರಾಜ್ಯ ಸರಕಾರ ಮಾಹಿತಿ ಪಡೆದುಕೊಳ್ಳಬೇಕು. ಈ ಸೌಲಭ್ಯಗಳನ್ನು ರಾಜ್ಯದ ಎಲ್ಲ ಪೌರ ಕಾರ್ಮಿಕರಿಗೆ ವಿಸ್ತರಿಸಬೇಕೆಂದು ನ್ಯಾಯಪೀಠವು ಹೇಳಿದೆ.
ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 17,767 ಪೌರಕಾರ್ಮಿಕರಿದ್ದು, ರಾಜ್ಯದಲ್ಲಿ 14 ಪಟ್ಟಣ ಪಂಚಾಯಿತಿ, 38 ನಗರ ಸಭೆ, 48 ಪುರಸಭೆಗಳಿವೆ.