ರಾಜ್ಯದ ಈ ಎರಡು ಜಿಲ್ಲೆಗಳು ದೇಶದ 'ಕೊರೋನ ಸೂಕ್ಷ್ಮ ಕ್ಷೇತ್ರಗಳು'
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.1: ಭಾರತದಲ್ಲಿ ಕೋವಿಡ್-19 ಸೋಂಕು ಹರಡುತ್ತಿರುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳಲ್ಲಿ ರಾಜ್ಯದ ಬೆಂಗಳೂರು ನಗರ ಹಾಗೂ ಮೈಸೂರು ಗುರುತಿಸಲ್ಪಟ್ಟಿದೆ. ಚಿಕ್ಕಬಳ್ಳಾಪುರ ಕೋವಿಡ್-19 ಸೋಂಕು ಹರಡುತ್ತಿರುವ(ಕಳೆದ 14 ದಿನಗಳಲ್ಲಿ) ಹೊಸ ಕ್ಷೇತ್ರಗಳಲ್ಲೊಂದು ಎಂದು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಅವರು, ದಿಲ್ಲಿಯ ಬಾಂಗ್ಲಾವಲಿಯ ನಿಝಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕರ್ನಾಟಕ ಮೂಲದ 342 ಜನರಲ್ಲಿ ಈಗ ಬೆಂಗಳೂರಿನಿಂದ 4 ಹಾಗೂ ಬೆಳಗಾವಿಯಿಂದ 5 ಜನರನ್ನು ಸೇರಿ ಒಟ್ಟು 200 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಉಳಿದವರನ್ನು ಶೀಘ್ರವೆ ಗುರುತಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.
ಕ್ವಾರಂಟೈನ್ ಮಾಡಿರುವವರ ಪೈಕಿ 12 ಜನರ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ ಲಭಿಸಿದೆ. ಇದರಲ್ಲಿ 12ರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ತಮ್ಮ ದೇಶಕ್ಕೆ ಹಿಂತಿರುಗದೆ ಇಲ್ಲೆ ಉಳಿದಿರುವವರನ್ನು ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುವುದು ಎಂದು ಶ್ರೀರಾಮುಲು ತಿಳಿಸಿದ್ದಾರೆ.