'ಕೊರೋನ ಹೆಲ್ತ್ ಬುಲೆಟಿನ್' ಜವಾಬ್ದಾರಿ ಸಚಿವ ಸುರೇಶ್ ಕುಮಾರ್ ಹೆಗಲಿಗೆ
ಬೆಂಗಳೂರು, ಎ.3: ರಾಜ್ಯದಲ್ಲಿ ಕೊರೋನ ಸೋಂಕು ಕುರಿತ ಎಲ್ಲ ಮಾಹಿತಿಯನ್ನು ಇನ್ನು ಮುಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವೆ ಕೊರೋನ ಕುರಿತ ಮಾಹಿತಿ ನೀಡುವಲ್ಲಿ ಸಾಕಷ್ಟು ಗೊಂದಲಗಳಿದ್ದವು. ಇಬ್ಬರ ನಡುವೆ ಸರಿಯಾದ ಸಮನ್ವಯತೆ ಇಲ್ಲದೆ ತಪ್ಪು ತಪ್ಪು ಅಂಕಿ ಅಂಶಗಳನ್ನು ಹೇಳುವುದು ಅಥವಾ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಇದರಿಂದ ಬೇಸತ್ತಿದ್ದ ಮುಖ್ಯಮಂತ್ರಿ ಕೊರೋನ ಕುರಿತ ಎಲ್ಲವನ್ನೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ವಹಿಸಿದ್ದರು. ಆದರೂ, ಸುಧಾರಿಸಿಕೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ತಮ್ಮ ಸಚಿವ ಸಂಪುಟ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಕೊರೋನ ವೈರಸ್ ಬಗ್ಗೆಯ ಎಲ್ಲ ಮಾಹಿತಿಯನ್ನು ನೀಡುವಂತೆ ಸಚಿವ ಸುರೇಶ್ ಕುಮಾರ್ ಗೆ ಸೂಚಿಸಿದರು. ಆ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಡುವಿನ ಮುಸಿಕಿನ ಗುದ್ದಾಟಕ್ಕೂ ಬ್ರೇಕ್ ಹಾಕಿದ್ದಾರೆ.
ಸುರೇಶ್ ಕುಮಾರ್ ಪ್ರತಿದಿನ ಸಂಜೆ 5.30ಕ್ಕೆ ವಿಧಾನಸೌಧದಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.