ಕಲಬುರಗಿಯಲ್ಲಿ ಸೀಲ್ಡೌನ್ ಇಲ್ಲ, ಅನಾವಶ್ಯಕವಾಗಿ ಓಡಾಡಿದರೆ ಜೈಲಿಗೆ: ಗೋವಿಂದ ಕಾರಜೋಳ
ಕಲಬುರಗಿ, ಎ.11: ಜಿಲ್ಲೆಯಲ್ಲಿ ಲಾಕ್ಡೌನ್ನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದ್ದು, ಅನಾವಶ್ಯಕವಾಗಿ ಮನೆಯಿಂದ ಹೊರ ಬರುವವರನ್ನು ಜೈಲಿಗೆ ಹಾಕಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ನಿಗದಿತ ಪರಧಿಯಲ್ಲಿ ಮಾತ್ರ ಕೊರೋನ ಹರಡುತ್ತಿದೆ. ಹೀಗಾಗಿ ಸೀಲ್ಡೌನ್ ನಿರ್ಧಾರ ಕೈಗೊಂಡಿಲ್ಲ. ಆದರೆ, ಎ.14ರ ನಂತರವೂ ಲಾಕ್ಡೌನ್ ಮುಂದುವರೆಯಲಿದೆ. ಅಷ್ಟರಲ್ಲಿ ನಿಯಂತ್ರಣಕ್ಕೆ ಬರದಿದ್ದರೆ, ಕೆಲವು ಅನಿವಾರ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ದಿಲ್ಲಿ ತಬ್ಲೀಗ್ ಸಭೆಯಲ್ಲಿ ಪಾಲ್ಗೊಡವರು, ಸೋಂಕಿತರ ನೇರ ಸಂಪರ್ಕ ಹೊಂದಿದವರು ಯಾರೂ ಸ್ವಪ್ರೇರಣೆಯಿಂದ ತಪಾಸಣೆಗೆ ಒಳಗಾಗುತ್ತಿಲ್ಲ. ಜಿಲ್ಲಾಡಳಿತದ ಅಧಿಕಾರಿಗಳೇ ಮನೆ ಮನೆಗೆ ಹೋಗಿ ತಪಾಸಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜನತೆ ಸಹಕಾರ ನೀಡದ ಕಾರಣಕ್ಕಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿದೇಶ, ಹೊರರಾಜ್ಯ, ಹೊರ ಜಿಲ್ಲೆಗಳಿಂದ ಬಂದ ಸುಮಾರು 31,518 ಮಂದಿಯನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರ ಮೇಲೂ ನಿಗಾ ವಹಿಸಲಾಗಿದೆ. ಉಳಿದಂತೆ ಯಾರಾದರು ತಪ್ಪಿಸಿಕೊಂಡಿದ್ದರೆ, ಈಗಾದರೂ ಸ್ವಯಂ ಪ್ರೇರಣೆಯಿಂದ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ನೀಡುವಂತಾಗಲಿ ಎಂದು ಅವರು ಮನವಿ ಮಾಡಿದರು.
ತಪಾಸಣೆಗೆ ಬರದೆ ತಪ್ಪಿಸಿಕೊಂಡರೆ ಜೈಲಿಗೆ
ವಿದೇಶದಿಂದ ಹಾಗೂ ದಿಲ್ಲಿ ತಬ್ಲೀಗ್ ಸಭೆಯಲ್ಲಿ ಭಾಗವಹಿಸಿ ಅದನ್ನು ಅಧಿಕಾರಿಗಳಿಗೆ ಹೇಳದೆ ತಪ್ಪಿಸಿಕೊಂಡಿದ್ದರೆ, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಲಾಕ್ಡೌನ್ ನಿಯಮವನ್ನು ಮೀರಿ ಅನಾವಶ್ಯಕವಾಗಿ ಓಡಾಡುವವರನ್ನು ಜೈಲಿಗೆ ಹಾಕಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ