15,762 ಅರ್ಜಿದಾರರಿಗೆ ತಾತ್ಕಾಲಿಕ ಪಡಿತರ ಚೀಟಿ: ಗೋವಿಂದ ಕಾರಜೋಳ
ಕಲಬುರಗಿ, ಎ.11: ಜಿಲ್ಲೆಯಲ್ಲಿ ಪಡಿತರಕ್ಕಾಗಿ ಅರ್ಜಿ ಸಲ್ಲಿಸಿದ್ದ ಸುಮಾರು 15,762 ಅರ್ಜಿದಾರರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡುವ ಮೂಲಕ ಕೊರೋನ ಸಮಸ್ಯೆ ಮುಗಿಯುವವರೆಗೂ ಆಹಾರಧಾನ್ಯ ನೀಡಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಸಭೆ ನಡೆಸಿದ ಅವರು, ತಾತ್ಕಾಲಿಕ ಪಡಿತರ ಚೀಟಿಯನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ವಿತರಿಸಬೇಕು ಎಂದರು.
ಇನ್ನು ಜಿಲ್ಲೆಯಲ್ಲಿ ಪಡಿತರ ಚೀಟಿ ಇಲ್ಲದ ಜೋಪಡಿ, ಟೆಂಟ್ ಹಾಕಿಕೊಂಡು ಅಲ್ಲಲ್ಲಿ ಸುಮಾರು 2,400 ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದು, ಅವರಿಗೂ ಕೊರೋನ ಸಮಸ್ಯೆ ಮುಗಿಯುವವರೆಗೂ ಆಹಾರಧಾನ್ಯ ವಿತರಣೆಗೆ ಕ್ರಮ ವಹಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹನುಮಂತರಾಯ ಮಾಲಾಜಿ, ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ, ಕಲಬುರಗಿ ಪೊಲೀಸ್ ಆಯುಕ್ತ ಸತೀಶ್ಕುಮಾರ್ ಮತ್ತಿತರರಿದ್ದರು.