3 ತಿಂಗಳ ಬಾಡಿಗೆ ವಿನಾಯಿತಿ ಘೋಷಿಸಿ: ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಮನವಿ
ಫೈಲ್ ಚಿತ್ರ
ಬೆಂಗಳೂರು, ಎ. 12: ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಅನೇಕ ದೇಶಗಳು ಕೊರೋನ ಸಂಕಷ್ಟದ ಅವಧಿಗೆ ಬಾಡಿಗೆ ವಿನಾಯಿತಿ ಘೋಷಿಸಿವೆ. ದಿಲ್ಲಿ ಸರಕಾರ 3 ತಿಂಗಳ ಬಾಡಿಗೆಯನ್ನು ತಾನೇ ಕೊಡುವ ಯೋಜನೆ ಘೋಷಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ 3 ತಿಂಗಳು ಬಾಡಿಗೆ ವಿನಾಯಿತಿಯನ್ನು ಪ್ರಧಾನಿ ಮೋದಿ ಘೋಷಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, "ದಿಲ್ಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುವ ಹಾಗೂ ಇಲ್ಲಿನ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಜನರ ಆರ್ಥಿಕ ಸ್ಥಿತಿ ನಾಜೂಕಾಗಿದೆ. ಇಂತಹ ಸಂದರ್ಭದಲ್ಲಿ ಮನೆ, ಪಿಜಿ, ಹಾಸ್ಟೆಲ್ ಮಾಲಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರತೆ ತೋರಲಿ. ಸರಕಾರ ಬಾಡಿಗೆ ವಿನಾಯಿತಿ ಘೋಷಿಸಿ ಜನ ಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಆರ್ಥಿಕ ಚಟುವಟಿಕೆಯೇ ಸಮಗ್ರವಾಗಿ ಸ್ಥಗಿತಗೊಂಡ ಈ ದಿನಗಳಲ್ಲಿ ಎಂದಿನಂತೆ ಪ್ರತಿ ತಿಂಗಳು ಮನೆ ಬಾಡಿಗೆಯನ್ನು ಕೊಡಲೇಬೇಕು ಎಂದು ಮನೆ ಮಾಲಕರು ಪಟ್ಟು ಹಿಡಿದರೆ ಆರ್ಥಿಕ ಹೊರೆಯನ್ನು ತಾಳಲಾರದ ಬಾಡಿಗೆದಾರ ಇನ್ನೊಂದು ಮನೆ ಹುಡುಕಿಕೊಂಡು ಹೋಗುವ ಸ್ಥಿತಿಯೂ ಇಲ್ಲವಾದ್ದರಿಂದ, ಕೇಂದ್ರ ಸರಕಾರ ಕೂಡಲೇ ಬಾಡಿಗೆ ವಿನಾಯಿತಿ ಯೋಜನೆಯನ್ನು ಪ್ರಧಾನಿ ಮೋದಿ ಘೋಷಣೆ ಮಾಡಬೇಕು'' ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.