ಸಾಗರ, ತೀರ್ಥಹಳ್ಳಿಯ ಇಬ್ಬರು ಮಹಿಳೆಯರಲ್ಲಿ ಮಂಗನಕಾಯಿಲೆ ಪತ್ತೆ
ಶಿವಮೊಗ್ಗ, ಎ.13: ಮಲೆನಾಡಿನಲ್ಲಿ ಮಂಗನಕಾಯಿಲೆ(ಕೆಎಫ್ಡಿ) ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಮತ್ತಿಬ್ಬರಲ್ಲಿ ಕೆಎಫ್ಡಿ ಸೋಂಕು ದೃಢವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ವಡ್ಡಿನಬೈಲು ಗ್ರಾಮದ ಭಾರತಿ (49) ಎಂಬುವವರಲ್ಲಿ ಕೆಎಫ್ಡಿ ಸೋಂಕು ಇರುವುದು ದೃಢವಾಗಿದೆ. ಇವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸೇರಿಸಲಾಗಿದೆ.
ಸಾಗರದಲ್ಲೂ ಒಂದು ಕೇಸ್ ಪತ್ತೆ
ಸಾಗರ ತಾಲೂಕಿನ ಮಹಿಳೆಯೊಬ್ಬರಿಗೂ ಕೆಎಫ್ಡಿ ದೃಢವಾಗಿದೆ. ಅರಳಗೋಡಿನ ಕಸಗುಪ್ಪೆ ಗ್ರಾಮದ ಚಂದ್ರಕಲಾ (50) ಅವರಿಗೆ ಸೋಂಕು ಇರುವುದು ದೃಢವಾಗಿದೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶರಾವತಿ ಅಭಯಾರಣ್ಯ ಪ್ರವೇಶ ಬಂದ್
ಶರಾವತಿ ಅಭಯಾರಣ್ಯದ ಭಾರಂಗಿ ಹೋಬಳಿಯ ಅರಳಗೋಡು, ಜೋಗ - ಕಾರ್ಗಲ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆನ್ನಿ ಶರಾವತಿ ವಲಯಾರಣ್ಯ ಪ್ರದೇಶದೊಳಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಕೆಎಫ್ಡಿ ಬಾಧಿತ ಪ್ರದೇಶಗಳಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.