ಲಾಕ್ಡೌನ್ ಸಂಕಷ್ಟ: ರೈತರಿಂದ 30 ಟನ್ ಹಣ್ಣು ಖರೀದಿಸಿ ಬಡವರಿಗೆ ಹಂಚಿದ ಸತೀಶ್ ಜಾರಕಿಹೊಳಿ
ಬೆಳಗಾವಿ, ಎ.19: ಲಾಕ್ಡೌನ್ ಹಿನ್ನೆಲೆ ಸಂಕಷ್ಟ ಎದುರಿಸುತ್ತಿದ್ದ ರೈತರಿಂದ ತರಕಾರಿ ಖರೀದಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇದೀಗ 30 ಟನ್ ಹಣ್ಣುಗಳನ್ನು ಖರೀದಿಸಿ ಬಡವರಿಗೆ ಹಂಚಿಕೆ ಮಾಡಿದ್ದಾರೆ.
ಇಲ್ಲಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಅವರು 3 ಎಕರೆ ಪ್ರದೇಶದಲ್ಲಿ ಬೆಳೆದ 30 ಟನ್ ಕಲ್ಲಂಗಡಿ ಹಾಗೂ ಸೀಬೆ (ಪೇರಲ) ಹಣ್ಣುಗಳನ್ನು ಖರೀದಿಸಿದ ಅವರು, ಸಾರ್ವಜನಿಕರು ಮತ್ತು ಕೊರೋನ ವಿರುದ್ಧ ಹೋರಾಡುತ್ತಿರುವ ಜಿಲ್ಲಾ ವ್ಯಾಪ್ತಿಯ ಕೊರೋನ ಸೈನಿಕರಿಗೆ ಹಂಚಿಕೆ ಮಾಡಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಮೇ 3ರ ಬಳಿಕ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಬೇಕು. ಸಂಪೂರ್ಣ ಬಂದ್ ಮಾಡಿದರೆ ಬಹಳ ತೊಂದರೆಯಾಗುತ್ತದೆ. ಕಾರ್ಖಾನೆ, ಕೃಷಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲಾಕ್ಡೌನ್ ಹಿನ್ನೆಲೆ ಕೃಷಿ ಚಟುವಟಿಕೆಗಳು ನಿಂತಿವೆ. ಇನ್ನು, ಕೈಗೆ ಬಂದಿರುವ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಕಷ್ಟವಾಗುತ್ತಿದ್ದು, ಹಲವು ಮಂದಿ ಫಸಲನ್ನು ನಾಶಪಡಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.