ಬಳ್ಳಾರಿ: ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಆರೋಪ; ಬಿಜೆಪಿ ಕಾರ್ಯಕರ್ತನ ಬಂಧನ
ಬಳ್ಳಾರಿ, ಎ.19: ಕೊರೋನ ಲಾಕ್ಡೌನ್ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಡಿ.ರಾಘವೇಂದ್ರ ಬಂಧಿತ ಬಿಜೆಪಿ ಕಾರ್ಯಕರ್ತನಾಗಿದ್ದು, ಲಾಕ್ಡೌನ್ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ರಾಘವೇಂದ್ರ ಮಾಲಕತ್ವದ ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಇರುವ ಮದ್ಯದಂಗಡಿಯ ಮೇಲೆ ದಾಳಿ ಮಾಡಿದ್ದರು.
ರಾಘವೇಂದ್ರ ಸಂಡೂರಿನಲ್ಲಿರುವ ಕಾರ್ತಿಕ್ ರೆಸಿಡೆನ್ಸಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕನಾಗಿದ್ದು, ಈ ಹಿಂದೆಯೇ ಲಾಕ್ಡೌನ್ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿಯನ್ನು ಮುಚ್ಚಿದ್ದರು. ಹೀಗಾಗಿ ಕದ್ದುಮುಚ್ಚಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಆರೋಪದಡಿ ರಾಘವೇಂದ್ರನನ್ನು ಬಂಧಿಸಲಾಗಿದೆ.
Next Story