ರೆತರಿಂದ ಹಣ್ಣು, ತರಕಾರಿ ಖರೀದಿಸಿ ಬಡವರಿಗೆ ವಿತರಣೆ: ಡಿ.ಕೆ ಸುರೇಶ್
ಹನೂರು, ಎ.20: ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ರೈತರಿಗೆ ಚೈತನ್ಯ ಶಕ್ತಿ ತುಂಬುವ ಸಲುವಾಗಿ ರೈತರಿಂದ ಹಣ್ಣು ತರಕಾರಿ ಖರೀದಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಡವರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.
ಹನೂರು ತಾಲೂಕಿನ ಹೂಗ್ಯಂ, ಮಿಣ್ಯಂ, ಗ್ರಾಪಂ ವ್ಯಾಪ್ತಿಯ ವಿವಿಧೆಡೆಯಲ್ಲಿ ರೈತರು ಬೆಳೆದಿರುವ ಕಲ್ಲಗಂಡಿಹಣ್ಣು, ತರಕಾರಿಯನ್ನು ಖರೀದಿಸಿ ಮಾತನಾಡಿದ ಅವರು, ಕೂಲಿ ಕಾರ್ಮಿಕರು, ಉದ್ಯಮಿಗಳು, ವ್ಯಾಪರಸ್ಥರು, ಕೈಗಾರಿಕೋದ್ಯಮಗಳಿಂದ ಹಿಡಿದು ಐಟಿಬಿಟಿ ಕಂಪೆನಿಯ ಉದ್ಯೋಗಸ್ಥರ ತನಕ ಯಾರಿಗೂ ಕೂಡ ದೇಶದಲ್ಲಿ ಕೊರೋನದಿಂದ 40 ದಿನಗಳ ಕಾಲ ಲಾಕ್ಡೌನ್ ಆಗುತ್ತೆ ಅನ್ನುವ ನಿರೀಕ್ಷೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರ ಮುಂದೆ ಅನೇಕ ಸವಾಲುಗಳಿವೆ ಎಂದರು.
ರೈತರು ಬೆಳೆದ ತೋಟಗಾರಿಕಾ ಬೆಳೆಗಳು ಒಂದು ವಾರದ ತನಕ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸಾಲ ಮಾಡಿ ಬಂಡವಾಳ ಹಾಕಿ ಶ್ರಮದಿಂದ ಬೆಳೆದ ಫಸಲು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅನ್ನದಾತರಿಗೆ ಚೈತನ್ಯ ತುಂಬುವ ಸಲುವಾಗಿ ಹಣ್ಣು ತರಕಾರಿಯನ್ನು ಖರೀದಿಸಿ ಬಡವರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭ ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಚಿಕ್ಕಮಾದು, ಡಾ.ರಂಗನಾಥ್, ಎಮ್.ಎಲ್.ಸಿ. ರವಿ, ಅರುಣ್ಕುಮಾರ್, ಮರಿಸ್ವಾಮಿ, ಚೇತನ್ದೊರೈರಾಜ್, ಮುಖಂಡರಾದ ಫಾರೂಕ್, ರಾಮಣ್ಣ ಉಪಸ್ಥಿತರಿದ್ದರು.