ಹುಬ್ಬಳ್ಳಿ: ಕರ್ತವ್ಯ ನಿರತ ಅಧಿಕಾರಿ ಮೇಲೆ ಲಾಠಿ ಬೀಸಿದ ಪೊಲೀಸರು !
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ, ಎ.22: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿಯಲ್ಲಿ ಸಹಾಯಕ ಕಂದಾಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಕೆ.ಅಂಗಡಿ ಅವರು ಹಾಲು ವಿತರಣೆ ಮಾಡಲು ತೆರಳುತ್ತಿದ್ದಾಗ ಪೊಲೀಸರು ಅವರ ಮೇಲೆ ಲಾಠಿ ಬೀಸಿದ ಘಟನೆ ನಡೆದಿದೆ.
ಈ ಘಟನೆ ಹಳೇ ಹುಬ್ಬಳ್ಳಿಯ ಹೆಗ್ಗೇರಿ ಕ್ರಾಸ್ ಬಳಿ ನಡೆದಿದ್ದು, ಗಾಯಗೊಂಡಿರುವ ಅಂಗಡಿ ಅವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಮಾತನಾಡಿ, ಅಂಗಡಿ ಅವರಿಗೆ ಪೊಲೀಸರು ಹೊಡೆದಿರುವುದು ನಿಜ. ಅಂಗಡಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವಿಷಯವನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಮಾತನಾಡಿ, ಕರ್ತವ್ಯದ ಮೇಲೆ ಹಾಲು ವಿತರಿಸಲು ತೆರಳುತ್ತಿದ್ದ ಅಧಿಕಾರಿ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಕರ್ತವ್ಯ ನಿರತ ಯಾವುದೇ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸದೇ ಅವರ ಕರ್ತವ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.