ಸೋನಿಯಾ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಜ್ಯದ ವಿವಧೆಡೆ ಅರ್ನಬ್ ಗೋಸ್ವಾಮಿ ವಿರುದ್ಧ ದೂರು
ದಾವಣಗೆರೆ, ಎ.24: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ತಮ್ಮ ವಾಹಿನಿಯಲ್ಲಿ ಹೀನಾಯವಾಗಿ ನಿಂದಿಸಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದಾವಣಗೆರೆ ಬಡಾವಣೆ ಠಾಣೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ.ಬಸವರಾಜ್ ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿ ದೂರು ನೀಡಿದ್ದಾರೆ.
ಬಡಾವಣಾ ಠಾಣೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಅವರಿಗೆ ದೂರು ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 153 (ಎ), 295 (ಎ) ಮತ್ತು 505 ಸೆಕ್ಷನ್ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಯಪ್ರಕಾಶ್, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಟಿ.ವಿ ಗಿರಿಧರ್, ಜಿಲ್ಲಾ ಇಂಟೆಕ್ ಕಾಂಗ್ರೆಸ್ ಅದ್ಯಕ್ಷ ಕೆ.ಎಂ ಮಂಜುನಾಥ್, ಡಿ ಶಿವಕುಮಾರ್ ಇದ್ದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್
ಮಂಡ್ಯ: ಪತ್ರಕರ್ತ ಅರ್ನಾಬ್ ಗೋಸ್ವಾಮಿ ರವರ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 153, 295ಎ, 505 ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಿ.ಡಿ ಗಂಗಾಧರ್ ಮತ್ತು ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ ಅವರಿಗೆ ದೂರು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸುಂಡಹಳ್ಳಿ ಮಂಜುನಾಥ್, ಸಿ.ಎಂ ದ್ಯಾವಪ್ಪ, ಚನ್ನಪ್ಪ ಹಾಜರಿದ್ದರು.
ಕೋಲಾರ ಜಿಲ್ಲಾ ಕಾಂಗ್ರೆಸ್
ಕೋಲಾರ: ರಿಪಬ್ಲಿಕನ್ ಟಿವಿಯ ಅರ್ನಬ್ ಗೋಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆ 153(ಎ), 295(ಎ) ಮತ್ತು 505ರ ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ರೀತಿಯ ಶಿಕ್ಷೆಗೆ ಗುರಿಪಡಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಂ.ವೆಂಕಟಪತಿ ಅವರು ನಗರ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಪ್ರಸಾದ ಬಾಬು, ಕಾರ್ಯದರ್ಶಿಗಳಾದ ತಬ್ರೇಜ್, ಪ್ರಧಾನ ಕಾರ್ಯದರ್ಶಿ ಮುರಳಿ ಎನ್.ಗೌಡ, ಪರ್ವೀಜ್ ಜಲೀಲ್, ಮಣಿ, ಜಮೀರ್, ಸೋನಿಯಾ ಗಾಂಧಿ ಬ್ರಿಗೇಡ್ ಅಧ್ಯಕ್ಷ ಜೋಗಮಲ್, ನಂದಗೋಪಾಲ್, ಆರೀಫ್ ಮಹಮದ್, ಜಾವೀದ್, ಮಕ್ಸೂದ್, ನವೀನ್ ಕುಮಾರ್, ತನ್ವೀರ್, ವಕೀಲರಾದ ಕೆ.ವಿ ಜಯರಾಮ್, ಉದಯಶಂಕರ್, ಸಮ್ಮೀವುಲ್ಲಾ, ಶಂಶುದ್ದೀನ್ ಇದ್ದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್
ಶಿವಮೊಗ್ಗ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಖಾಸಗಿ ಟಿವಿ ಚಾನಲ್ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವ ದಲ್ಲಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.
ಕೊರೋನ ವೈರಸ್ ಎಲ್ಲೆಲೆಡೆ ಹಬ್ಬುತ್ತಿರುವುದರಿಂದ ದೇಶ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿದೆ. ಇಂತಹ ಸಂದರ್ಭದಲ್ಲಿ ಕೆಲ ದೃಶ್ಯಮಾಧ್ಯಮಗಳು ಕೊರೋನ ವಿಷಯದ ಮೂಲಕ ಕೋಮು ಭಾವನೆ ಬಿತ್ತುವ ಕೆಲಸ ಮಾಡುತ್ತಿದೆ ಎಂದು ದೂರಿದರು. ಇದರಿಂದ ಸಮಾಜದ ನಡುವೆಕಂದಕ ಸೃಷ್ಟಿಯಾಗುವ ಸಂಭವವಿದೆ. ಅಲ್ಲದೆ ದೇಶದಲ್ಲಿ ಅಶಾಂತಿ ನೆಲೆಸಬಹುದು. ಹೀಗಾಗಿ ಇಲ್ಲಸಲ್ಲದ ಸುದ್ದಿ ಬಿತ್ತರಿಸಿದಲ್ಲದೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ಅವಹೇಳನಕಾರಿಯಾಗಿ ಚಿತ್ರಿಸಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಬೇಕು ಹಾಗೂ ಅವರ ದೃಶ್ಯ ವಾಹಿನಿಗೆ ನಿಷೇಧ ವಿಧಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿ ಎಸ್.ಟಿ.ಚಂದ್ರ ಶೇಖರ, ಡಿ.ಜೆ.ಜಗತ್, ಕುಮಾರಸ್ವಾಮಿ, ಪ್ರಭಾಕರ ಗೌಡ, ಎನ್.ಅಣ್ಣಪ್ಪ, ಸೌಗಂಧಿಕ, ಸ್ಟೆಲ್ಲಾ ಮಾರ್ಟಿನ್, ಮಂಜುನಾಥ ಗೌಡ ಮುಂತಾದವರು ಇದ್ದರು.