ಮಾಂಗಲ್ಯ ಧಾರಣೆ ವೇಳೆ ಮಾತ್ರ ಮಾಸ್ಕ್ ಧರಿಸಿರಲಿಲ್ಲ: ಹೈಕೋರ್ಟ್ಗೆ ವಿವರಣೆ ನೀಡಿದ ಸರಕಾರ
ಲಾಕ್ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರ
ಬೆಂಗಳೂರು, ಮೇ 5: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮದುವೆಯಲ್ಲಿ ಅವರ ಕುಟುಂಬಸ್ಥರು ಮಾಂಗಲ್ಯ ಧಾರಣೆ ವೇಳೆ ಮಾತ್ರ ಮಾಸ್ಕ್ ಧರಿಸಿರಲಿಲ್ಲ ಎಂದು ಹೈಕೋರ್ಟ್ಗೆ ಸರಕಾರಿ ಪರ ವಕೀಲರು ವಿವರಣೆ ನೀಡಿದರು.
ಕಳೆದ ತಿಂಗಳು ನಡೆದ ನಿಖಿಲ್ ಕುಮಾರಸ್ವಾಮಿ ಮದುವೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲವೆಂದು ವಕೀಲ ಜಿ.ಆರ್.ಮೋಹನ್ ಅವರು ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ನ್ಯಾಯಪೀಠವು ಸರಕಾರಕ್ಕೆ ವಿವರಣೆ ನೀಡಲು ಸೂಚನೆ ನೀಡಿತ್ತು. ಸರಕಾರಿ ಪರ ವಕೀಲರು, ನಿಖಿಲ್ ಅವರ ಮದುವೆಯಲ್ಲಿ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು ಎಂಬ ವಿವರಣೆಯನ್ನು ನ್ಯಾಯಪೀಠಕ್ಕೆ ನೀಡಿದರು.
ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸಲಾಗಿತ್ತು. ಆದರೆ, ಮಾಂಗಲ್ಯ ಧಾರಣೆ ವೇಳೆ ಮಾತ್ರ ಕುಟುಂಬಸ್ಥರು ಮಾಸ್ಕ್ ಧರಿಸಿಲ್ಲದಿರುವುದು ಕಂಡು ಬಂದಿದೆ. ಎ.17ರಂದು ಕೇತಗಾನಹಳ್ಳಿಯ ಮನೆಯಲ್ಲಿ ಬೆಳಗ್ಗೆ 8ರಿಂದ 10ಗಂಟೆವರೆಗೆ ಮದುವೆ ಸಮಾರಂಭ ನಡೆದಿದೆ ಸರಕಾರಿ ಪರ ವಕೀಲರು ಪೀಠಕ್ಕೆ ವಿವರಣೆ ನೀಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು.