ಕೊರೋನ ಸಂಬಂಧ ಸಭೆ: ಸಚಿವ ನಾರಾಯಣಗೌಡ-ಜೆಡಿಎಸ್ ಶಾಸಕರ ನಡುವೆ ವಾಕ್ಸಮರ
ಮಂಡ್ಯ, ಮೇ 27: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19ರ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಜೆಡಿಎಸ್ ಶಾಸಕರ ನಡುವೆ ವಾಕ್ಸಮರ ನಡೆಯಿತು.
ಮೇ 25 ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ಶಾಸಕರು ತಮಗೆ ಕೋವಿಡ್ ನಿಯಂತ್ರಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಡಳಿತ ಸತ್ಯವನ್ನು ಮಾರೆಮಾಚುತ್ತಿದ್ದಾರೆ. ಮುಂದಿನ ಎರಡು ದಿನಗಳೊಳಗೆ ಸಭೆ ಕರೆದು ಸ್ಪಷ್ಟೀಕರಣ ನೀಡದಿದ್ದರೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಅದರಂತೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆಯಲಾಗಿತ್ತು. ಸಭೆಗೆ ಹಾಜರಾಗದೆ ಸಭೆಯಿಂದ ದೂರ ಉಳಿದಿದ್ದ ಶಾಸಕರನ್ನು ಮನವೊಲಿಸಿದ ನಂತರ ನಿಗದಿತ ಸಮಯಕ್ಕಿಂತ 40 ನಿಮಿಷ ತಡವಾಗಿ ಸಭೆ ಪ್ರಾರಂಭಿಸಲಾಯಿತು.
ಸಭೆಯಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಮತ್ತು ಸಚಿವ ನಾರಾಯಣಗೌಡರ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿತು. ಇಬ್ಬರೂ ಪರಸ್ಪರ ಏಕವಚನ ಪದ ಬಳಕೆ ಮಾಡಿದರು. ಅದರಲ್ಲೂ 'ಇದರ ಬಗ್ಗೆ ಕೇಳೋಕೆ ನಿನ್ಯಾವನು ಹೋಗೋಲೇ ಎಂದು ಸಚಿವ ನಾರಾಯಣಗೌಡ ಶಾಸಕ ಸುರೇಶ್ ಗೌಡರಿಗೆ ಏಕವಚನ ಬಳಸಿದ್ದು, ಸಭೆ ಗೊಂದಲದ ಗೂಡಾಯಿತು. ಈ ಮಧ್ಯೆ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು. ಪರಿಸ್ಥಿತಿ ತಾರಕಕ್ಕೇರುತ್ತಿದಂತೆ ಶಾಸಕರಾದ ಸಿ.ಎಸ್.ಪುಟ್ಟರಾಜು ಮತ್ತು ಡಾ.ಕೆ.ಅನ್ನದಾನಿ ಮಧ್ಯೆ ಪ್ರವೇಶಿಸಿ ಸುರೇಶ್ ಗೌಡರನ್ನು ಸಮಾಧಾನ ಮಾಡಿದರು ಎನ್ನಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ನಮ್ಮದು ಕೋಳಿ ಜಗಳ. ನಾವು ಈ ಹಿಂದೆ ಒಂದೇ ಪಕ್ಷದಲ್ಲಿದ್ದವರು. ಒಂದೇ ಕಾರಿನಲ್ಲಿ ಓಡಾಡುತ್ತಿದ್ದವರು. ಸಣ್ಣ-ಪುಟ್ಟ ನ್ಯೂನ್ಯತೆಗಳನ್ನು ಈ ಸಭೆಯಲ್ಲಿ ಬಗೆಹರಿಸಿಕೊಂಡಿದ್ದೇವೆ. ಕೆಲ ಅನುಮಾನಗಳಿಗೆ ಈ ಸಭೆಯಲ್ಲಿ ತೆರೆ ಬಿದ್ದಿದೆ. ಈ ಸಭೆಯಲ್ಲಿ ಯಾವುದೇ ಜಗಳವಾಗಿಲ್ಲ ಎಂದು ಸ್ಪಷ್ಟಪಡಿಸಿದರು.