ಇದುವರೆಗೆ 158 ಶ್ರಮಿಕ ರೈಲುಗಳಲ್ಲಿ 2.25 ಲಕ್ಷ ಮಂದಿ ತಾಯ್ನಾಡಿಗೆ
ಬೆಂಗಳೂರು, ಮೇ 27: ನೈರುತ್ಯ ರೈಲ್ವೆ ವಲಯದ 6 ಶ್ರಮಿಕ ರೈಲುಗಳು ಸೋಮವಾರ ರಾಜ್ಯದಲ್ಲಿ ಸಿಲುಕಿರುವ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರನ್ನು ಹೊತ್ತೊಯ್ದಿವೆ. ಹುಬ್ಬಳ್ಳಿಯಿಂದ ಬಿಹಾರಕ್ಕೆ ಒಂದು, ಬೆಂಗಳೂರಿನಿಂದ ಬಿಹಾರಕ್ಕೆ ಮೂರು ಮತ್ತು ಬೆಂಗಳೂರಿನಿಂದ ತಲಾ ಒಂದು ಉತ್ತರ ಪ್ರದೇಶ ಮತ್ತು ಒಡಿಶಾಗೆ ಸಂಚರಿಸಿವೆ.
ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಸುಮಾರು 9,033 ನಾಗರಿಕರು ತಮ್ಮ ರಾಜ್ಯಗಳಿಗೆ ಪಯಣಿಸಿದ್ದಾರೆ. ಅಂತೆಯೇ ಸೋಮವಾರ ಸಂಜೆ ಬೆಂಗಳೂರಿನಿಂದ ಬಿಹಾರಕ್ಕೆ 2, ಜಾರ್ಖಂಡ್ ಗೆ 2, ಉತ್ತರ ಪ್ರದೇಶ ಮತ್ತು ಮಿಜೋರಾಂಗೆ ತಲಾ ಒಂದು ರೈಲು ಸಂಚರಿಸಿವೆ. ಇಲ್ಲಿಯವರೆಗೆ 158 ಶ್ರಮಿಕ ರೈಲುಗಳಲ್ಲಿ 2.25 ಲಕ್ಷ ಮಂದಿ ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದಾರೆ.
ಹುಬ್ಬಳ್ಳಿಯಿಂದ ಬಿಹಾರದ ದರ್ಭಾಂಗಗೆ 1,532 ಮಂದಿ, ಬೆಂಗಳೂರಿನಿಂದ ಬಿಹಾರದ ಮುಜಾಫರ್ ಪುರಕ್ಕೆ 1599 ಮಂದಿ, ಬಿಹಾರದ ಭಲ್ಗಾಪುರಕ್ಕೆ 1502 ಮಂದಿ, ಒಡಿಶಾದ ಬಾಲ್ಸೋರ್ ಗೆ 1,600 ಮಂದಿ, ಬಿಹಾರದ ಸಹರ್ಸಾಗೆ 1,600 ಮಂದಿ, ಉತ್ತರ ಪ್ರದೇಶದ ಗೋರಖ್ಪುರಕ್ಕೆ 1,600 ಮಂದಿ ಶ್ರಮಿಕ ರೈಲುಗಳಲ್ಲಿ ತೆರಳಿದ್ದಾರೆ. ಶ್ರಮಿಕ ರೈಲುಗಳಲ್ಲಿ ಸಂಚರಿಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದೆ. ರೈಲುಗಳಿಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.