ಕ್ಷುಲ್ಲಕ ವಿಚಾರ: ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ
ಸಾಗರ, ಮೇ 28: ಕ್ಷುಲ್ಲಕ ವಿಚಾರಕ್ಕೆ ಯುವಕನೋರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸಾಗರ ತಾಲೂಕಿನ ಮಾಂಕಲಳೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಸಾಗರ ನೆಹರೂ ನಗರ ನಿವಾಸಿ ಶಾಝಿಲ್ (23) ಕೊಲೆಗೀಡಾದ ಯುವಕ ಎಂದು ತಿಳಿದು ಬಂದಿದೆ.
ಈತ ಸಮಯದ ಹಿಂದೆ ನೆಹರೂ ನಗರದಲ್ಲಿರುವ ಮೊಬೈಲ್ ಅಂಗಡಿಗೆ ತನ್ನ ಮೊಬೈಲನ್ನು ರಿಪೇರಿಗೆ ಕೊಟ್ಟುದ್ದ ಎನ್ನಲಾಗಿದ್ದು, ಮೊಬೈಲ್ ಅಂಗಡಿಯಾತ ಅದನ್ನು ಹಿಂದಿರುಗಿಸದೇ ಸತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಇಬ್ಬರ ನಡುವೆ ಹಲವು ಬಾರಿ ಜಗಳವೂ ನಡೆತಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ ಮೊಬೈಲ್ ಹಿಂದಿರುಗಿಸುವುದಾಗಿ ಹೇಳಿ ಶಾಝಿಲ್ ನನ್ನು ಅಂಗಡಿಗೆ ಕರೆಸಿಕೊಂಡು ಮೊಬೈಲ್ ಅಂಗಡಿಯಾತ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಸಾಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಝಿಲ್ ರಜೆಯ ಮೇಲೆ ವಿದೇಶದಿಂದ ಬಂದಿದ್ದು, ಲಾಕ್ ಡೌನ್ ನಿಂದಾಗಿ ಹಿಂದಿರುಗಲಾಗದೆ ಊರಿನಲ್ಲೆ ಉಳಿದಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.