ರಾಜ್ಯದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್: ಮಾರ್ಗಸೂಚಿ ಪ್ರಕಟಿಸಿದ ಧಾರ್ಮಿಕ ಮುಖಂಡರು
ಇಲ್ಲಿದೆ ಮುಂಜಾಗೃತಾ ಕ್ರಮಗಳ ಸಂಪೂರ್ಣ ವಿವರ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 29: ಕೋವಿಡ್-19 ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿರುವ ಸಾಮೂಹಿಕ ನಮಾಝ್ಗಳನ್ನು ಮಸೀದಿಗಳಲ್ಲಿ ನೆರವೇರಿಸಲು ಸರಕಾರ ಅವಕಾಶ ಕಲ್ಪಿಸಿದ್ದಲ್ಲಿ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಮಸೀದಿಗಳಿಗೆ ಅಮಿರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಸೇರಿದಂತೆ ಧಾರ್ಮಿಕ ಮುಖಂಡರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಸಾಮೂಹಿಕ ನಮಾಝ್ ವೇಳೆ ಮಸೀದಿಗಳಲ್ಲಿ ಅಳವಡಿಸಲಾಗಿರುವ ಕಾರ್ಪೆಟ್ಗಳು ಹಾಗೂ ವುಝೂ ( ಅಂಗಸ್ನಾನ) ಮಾಡುವ ಟ್ಯಾಂಕ್ಗಳನ್ನು ಬಳಸಬಾರದು. ಒಂದು ವೇಳೆ ಕಾರ್ಪೆಟ್ ತೆರವುಗೊಳಿಸಲು ಸಾಧ್ಯವಾಗದಿದ್ದರೆ ಮಸೀದಿಯ ಒಳಗೆ ಶುಚಿತ್ವ ಕಾಪಾಡಲು ಆದ್ಯತೆ ನೀಡಬೇಕು. ವುಝೂ ನಿರ್ವಹಿಸಲು ನಳ್ಳಿ ಮೂಲಕ ನೀರು ಬಳಸಬೇಕು. ಮಸೀದಿಯಲ್ಲಿರುವ ಟೋಪಿಗಳು ಹಾಗೂ ಟವೆಲ್ಗಳನ್ನು ಬಳಸಬಾರದು.
ಮಸೀದಿಯ ನೆಲವನ್ನು ಕಾಲಕಾಲಕ್ಕೆ ಫಿನಾಯಿಲ್, ಡೆಟಾಲ್ ಸೇರಿದಂತೆ ಇನ್ನಿತರ ಸೋಂಕು ನಿರೋಧಕ ದ್ರಾವಣದ ಮೂಲಕ ಸ್ವಚ್ಛಗೊಳಿಸಬೇಕು. ಮಸೀದಿ ಆವರಣದಲ್ಲಿರುವ ಶೌಚಾಲಯಗಳ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಿ, ನಿಯಮಿತವಾಗಿ ಶೌಚಾಲಯದ ಸ್ಥಳವನ್ನು ಫಿನಾಯಿಲ್, ಡೆಟಾಲ್ ಸೇರಿದಂತೆ ಇನ್ನಿತರ ಸೋಂಕು ನಿರೋಧಕ ದ್ರಾವಣದ ಮೂಲಕ ಶುಚಿಗೊಳಿಸಬೇಕು.
ಮಸೀದಿಗಳಿಗೆ ನಮಾಝ್ ನಿರ್ವಹಿಸಲು ಬರುವವರು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಮನೆಗಳಿಂದಲೇ ವುಝೂ ಮಾಡಿಕೊಂಡು, ನಮಾಝ್ ನಿರ್ವಹಿಸಲು ಬಳಸುವ ಮ್ಯಾಟ್(ಮುಸಲ್ಲ) ಅನ್ನು ತೆಗೆದುಕೊಂಡು ಬರಬೇಕು. ಮಸೀದಿಯೊಳಗೆ ಪ್ರವೇಶಿಸುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಸರ್, ಸೋಪು ಅಥವಾ ಹ್ಯಾಂಡ್ವಾಷ್ ಮೂಲಕ ಸ್ವಚ್ಛಗೊಳಿಸಿಕೊಳ್ಳಬೇಕು. ಮಸೀದಿ ಒಳಗೆ ಬರುವಾಗ ಹಾಗೂ ಹೊರಗೆ ಹೋಗುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಗಳನ್ನು ಧರಿಸಿಕೊಂಡು ಬರಬೇಕು.
ಮಸೀದಿಯೊಳಗೆ ಕೈಕುಲುಕುವುದು ಅಥವಾ ತಬ್ಬಿಕೊಳ್ಳುವುದನ್ನು ನಿರ್ಬಂಧಿಸಬೇಕು. ಸುನ್ನತ್ ಹಾಗೂ ನಫಿಲ್ ನಮಾಝ್ಗಳನ್ನು ಎಂದಿನಂತೆ ತಮ್ಮ ಮನೆಗಳಲ್ಲಿ ನಿರ್ವಹಿಸಿ, ಕೇವಲ ಫರ್ಝ್ ನಮಾಝ್(ಕಡ್ಡಾಯ ನಮಾಝ್) ಅನ್ನು ಮಾತ್ರ ಮಸೀದಿಗಳಲ್ಲಿ ನಿರ್ವಹಿಸಿ. ಮಸೀದಿಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯವನ್ನು ವಿನಿಯೋಗಿಸಿ. ಫರ್ಝ್ ನಮಾಝ್ ಹಾಗೂ ಜುಮಾ ನಮಾಝ್(ಶುಕ್ರವಾರದ ಪ್ರಾರ್ಥನೆ) ಸಂದರ್ಭದಲ್ಲಿ ಕುತ್ಬಾ ಕಡಿಮೆ ಅವಧಿಯಲ್ಲಿರುವಂತೆ ಇಮಾಮ್ ಹಾಗೂ ಖತೀಬ್ಗಳು ಗಮನದಲ್ಲಿರಿಸಿಕೊಳ್ಳಬೇಕು.
ಫರ್ಝ್ ನಮಾಝ್ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯಿಂದ ಕನಿಷ್ಠ 3 ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವ ಜಾಗದಲ್ಲಿ ಈ ಸಂಬಂಧ ಗುರುತು ಹಾಕಬೇಕು. ಈ ಪರಿಸ್ಥಿತಿಯಲ್ಲಿ ಅಗತ್ಯವಿದ್ದಲ್ಲಿ ಜುಮಾ ನಮಾಝ್ಗಾಗಿ ಒಂದಕ್ಕಿಂತ ಹೆಚ್ಚಿನ ಜಮಾತ್ಗಳನ್ನು ವಿವಿಧ ಸಮಯದಲ್ಲಿ ನಿಗದಿಗೊಳಿಸಬಹುದಾಗಿದೆ.
ಹಿರಿಯ ನಾಗರಿಕರು, ಮಕ್ಕಳು ಹಾಗೂ ಕೆಮ್ಮ, ನೆಗಡಿ, ಜ್ವರದಿಂದ ಬಳಲುತ್ತಿರುವವರು ಮಸೀದಿಗೆ ಬರುವುದು ಬೇಡ. ಕೆಮ್ಮುವಾಗ ಹಾಗೂ ಸೀನುವಾಗ ಮುಂಜಾಗ್ರತೆ ವಹಿಸಬೇಕು. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿಯೂ ಈ ಬಗ್ಗೆ ವಿಶೇಷ ಗಮನವಿರಿಸಿಕೊಳ್ಳಬೇಕು ಎಂದು ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.