ರಮೇಶ್ ಜಾರಕಿಹೊಳಿಯ 'ಕೈ ಶಾಸಕರ ರಾಜೀನಾಮೆ' ಹೇಳಿಕೆ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರ ಪ್ರತಿಕ್ರಿಯೆ
ಚಾಮರಾಜನಗರ, ಮೇ 29: ಬಿಜೆಪಿ ಹೈಕಮಾಂಡ್ ಒಪ್ಪಿದರೆ ಕಾಂಗ್ರೆಸ್ನ 5 ಜನ ಶಾಸಕರ ರಾಜೀನಾಮೆ ಕೊಡಿಸ್ತೀನಿ ಎನ್ನುವ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ತಿರುಗೇಟು ನೀಡಿದ್ದಾರೆ.
ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ನೂರಾರು ಜನ ಬರ್ತಾರೆ ಹೋಗ್ತಾರೆ, ಕಾಂಗ್ರೆಸ್ಗೆ ದೊಡ್ಡ ಇತಿಹಾಸವಿದೆ ಎಂದು ಹನೂರು ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಹಿನ್ನಲೆ ನೋಡಲಿ. ಯಾವ ಪಕ್ಷದಲ್ಲಿದ್ದವರು, ಯಾವ ಪಕ್ಷದಿಂದ ಬಂದವರು, ಯಾವ ಪಕ್ಷದಿಂದ ಅಧಿಕಾರಕ್ಕೆ ಬಂದರು. ನಮ್ಮವರನ್ನೆಲ್ಲಾ ಕರೆದುಕೊಂಡು ಹೋಗಿ ಪಕ್ಷಾಂತರ ಮಾಡಿ ಬಿಜೆಪಿಯಲ್ಲಿ ಪವರ್ ಫುಲ್ ಆಗಿದ್ದಾರೆ. ಯಾವ ಪಕ್ಷ ಮುಳುಗುತ್ತದೆ, ತೇಲುತ್ತದೆ ಎನ್ನುವುದು ಚುನಾವಣೆ ಬಂದಾಗ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷವನ್ನು ಮುಳುಗಿಸುವುದು ಯಾರ ಕೈಯಲ್ಲೂ ಇಲ್ಲ. ಹಲವಾರು ಶಾಸಕರು ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂದು ಸಚಿವರ ಹೇಳಿಕೆಗೆ ತಿರುಗೇಟು ನೀಡಿದರು.